ಜಿಲ್ಲಾಸ್ಪತ್ರೆಯಲ್ಲಿ ಮೂರು ಶಿಶುಗಳ ನಿಗೂಢ ಸಾವು, ಸಾವಿನ ಬಗ್ಗೆ ತನಿಖೆ! | ಜನತಾ ನ್ಯೂಸ್
ಬೆಳಗಾವಿ : ಎರಡು ದಿನಗಳ ಹಿಂದೆಯಷ್ಟೇ ಚುಚ್ಚುಮದ್ದು ಪಡೆದಿದ್ದ ಮೂರು ಶಿಶುಗಳು ನಿಗೂಢವಾಗಿ ಸಾವನ್ನಪ್ಪಿವೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಮೂರು ಕಂದಮ್ಮಗಳು ಚಿಕಿತ್ಸೆ ಫಲಿಸದೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪವಿತ್ರಾ ಹುಲಗುರ(13 ತಿಂಗಳು), ಮಧು ಉಮೇಶ ಕುರಗುಂದಿ(14 ತಿಂಗಳು) . ಚೇತನ ಪೂಜಾರಿ (15 ತಿಂಗಳು) ಎಂಬ ಶಿಶುಗಳು ಮೃತಪಟ್ಟಿವೆ.
ರೂಬೆಲ್ಲಾ ಚುಚ್ಚುಮದ್ದು ಪಡೆದು ಮೂವರು ಕಂದಮ್ಮಗಳು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾವಿನ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಡಿಹೆಚ್ಒ ಡಾ. ಎಸ್.ವಿ. ಮುನ್ಯಾಳ್ ಹೇಳಿದ್ದಾರೆ.
ರಾಮದುರ್ಗ ತಾಲೂಕಿನ ಮಲ್ಲಾಪುರ- ಬೋಚಬಾಳ ಗ್ರಾಮದಲ್ಲಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು. ಚುಚ್ಚುಮದ್ದು ನೀಡಿದ ಬಳಿಕ ಮಕ್ಕಳಿಗೆ ವಾಂತಿ ಭೇದಿ ಶುರುವಾಗಿದೆ. ಮನೆಯಲ್ಲಿ ಇದ್ದಾಗ ವಾಂತಿ ಹೆಚ್ಚಾಗಿತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಜ.12ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ಲಸಿಕೆ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ನಾವು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿವೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮವಹಿಸುತ್ತೇವೆ. ಈಗಾಗಲೇ ಪ್ರಕರಣ ಕುರಿತು ತನಿಖೆಗೆ ಆದೇಶಿಸಿದ್ದೇವೆ. ಇದರಲ್ಲಿ ಯಾರೇ ಸಿಬ್ಬಂದಿ ತಪ್ಪು ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇನ್ನುಳಿದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮಾರಕ ರೋಗಗಳ ತಡೆಗೆ ನೀಡುವ ಎಲ್ಲ ಲಸಿಕೆಗಳನ್ನು ಮಕ್ಕಳಿಗೆ ಹಾಕಿಸಬೇಕು ಎಂದು ಡಿಹೆಚ್ಒ ಡಾ. ಎಸ್.ವಿ.ಮುನ್ಯಾಳ ಮನವಿ ಮಾಡಿದರು.