ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂಸ್
ಬೆಂಗಳೂರು : ಶಾಲೆಯ ಮಕ್ಕಳೊಂದಿಗೆ ಊಟ ಸೇವಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸವಾಲು ಎಸೆದಿರುವ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಗೆ ಶಾಸಕರು ಲೇವಡಿ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಮಾಸ್ಕ ಧರಿಸದೆ ಬೆರೆತಿರುವ ವೀಡಿಯೊ ವೈರಲ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವೀಡಿಯೊ ಒಂದನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ದಾವಣಗೆರೆ ಪೋಲಿಸ್ ವರಿಷ್ಠಾಧಿಕಾರಿ, ಕೇಂದ್ರ ಮಕ್ಕಳ ಹಕ್ಕು ಆಯೋಗ ವನ್ನು ಉದ್ದೇಶಿಸಿ ಬರೆದಿರುವ ಟ್ವೀಟ್ ನಲ್ಲಿ, ಶಾಸಕ ರೇಣುಕಾಚಾರ್ಯ ನಿಮ್ಮದೇ ಸರ್ಕಾರದ ಕೋವಿಡ್ ನಿಯಮಗಳನ್ನ ಉಲ್ಲಂಘಿಸಿ, ಮಾಸ್ಕ್ ಕೂಡ ಧರಿಸದೇ ಮಕ್ಕಳೊಂದಿಗೆ ಬೆರೆತಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿದೆ. ಈಗಲಾದರೂ ಇವರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರುವಿರಾ? ಈ ದೇಶದ ಕಾನೂನು ನಿಮ್ಮ ಶಾಸಕರಿಗೆ ಅನ್ವಯಿಸೋದಿಲ್ವಾ? , ಎಂದು ಸವಾಲೆಸೆದಿದ್ದಾರೆ.
ಇದನ್ನು ಮರುಹಂಚಿಕೊಂಡಿರುವ ಶಾಸಕ ರೇಣುಕಾಚಾರ್ಯ ಅವರು, ಜಗತ್ತಲ್ಲಿ ಊಟಕ್ಕೆ ಕುಳಿತಾಗ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ "ಕಾಂಗ್ರೆಸ್" , ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.