ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟ : ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಅಣ್ಣಾ ಹಜಾರೆ ವಿಷಾಧ | ಜನತಾ ನ್ಯೂಸ್
ಮುಂಬೈ : ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ದುರದೃಷ್ಟಕರ, ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವಿಷಾಧ ವ್ಯಕ್ತಪಡಿಸಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಸಂದರ್ಭದಲ್ಲಿ ಹೆಚ್ಚುತ್ತಿರುವ ಭೃಷ್ಟಾಚಾರದ ವಿರುದ್ಧ ಜನ ಆಂದೋಲನ ನಡೆಸಿ ಸರ್ಕಾರವನ್ನೇ ಅಲ್ಲೋಲಕಲ್ಲೋಲ ಗೊಳಿಸಿದ್ದ ಗಾಂಧಿವಾದಿ ಅಣ್ಣಾ ಹಜಾರೆ ಮಹಾ ಸರ್ಕಾರದ ವೈನ್ ನೀತಿಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿರುವ ಸೂಪರ್ಮಾರ್ಕೆಟ್ ಮತ್ತು ವಾಕ್-ಇನ್ ಸ್ಟೋರ್ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನೆ ಮೈತ್ರಿಯ ಮಹಾಅಘಾಡಿ ಸರ್ಕಾರ ನಿರ್ಧಾರ ಕೈಗೊಂಡಿದೆ.
"ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ದುರದೃಷ್ಟಕರ. ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ, ಆದರೆ ಆರ್ಥಿಕ ಲಾಭಕ್ಕಾಗಿ ಮದ್ಯದ ವ್ಯಸನಕ್ಕೆ ಕಾರಣವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ನನಗೆ ಬೇಸರ ತಂದಿದೆ", ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸೂಪರ್ಮಾರ್ಕೆಟ್ ಮತ್ತು ವಾಕ್-ಇನ್ ಸ್ಟೋರ್ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಎಏನ್ಐನೊಂದಿಗೆ ಮಾತನಾಡಿದ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು, "ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಲಾಭವಾಗುತ್ತದೆ. ರೈತರ ಆದಾಯ ದ್ವಿಗುಣಗೊಳಿಸಲು ನಾವು ಇದನ್ನು ಮಾಡಿದ್ದೇವೆ. ಬಿಜೆಪಿ ಕೇವಲ ವಿರೋಧಿಸುತ್ತದೆ ಆದರೆ ರೈತರಿಗೆ ಏನನ್ನೂ ಮಾಡುವುದಿಲ್ಲ", ಎಂದು ಸಮರ್ಥಿಸಿಕೊಂಡಿದ್ದಾರೆ.