ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ | ಜನತಾ ನ್ಯೂಸ್
ನವದೆಹಲಿ : ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಉತ್ತರ ಪ್ರದೇಶದ ಮೀರತ್ ಬಳಿ ತಾವು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವ ಆಘಾತಕಾರಿ ಘಟನೆಯ ಬಗ್ಗೆ ದೂರಿದ್ದಾರೆ.
"ಮೀರತ್ನ ಕಿಥೌರ್ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ 2 ಜನರಿಂದ ನನ್ನ ವಾಹನದ ಮೇಲೆ 3-4 ಸುತ್ತು ಗುಂಡುಗಳನ್ನು ಹಾರಿಸಲಾಯಿತು; ಅವರು ಒಟ್ಟು 3-4 ಜನರಿದ್ದರು. ನನ್ನ ವಾಹನದ ಟೈರ್ಗಳು(ಚಿತ್ರದಲ್ಲಿ) ಪಂಕ್ಚರ್ ಆಗಿದ್ದು, ನಾನು ಇನ್ನೊಂದು ವಾಹನದಲ್ಲಿ ಹೊರಟೆ", ಎಂದು ಅಸಾದುದ್ದೀನ್ ಓವೈಸಿ ಅವರು ಸುದ್ಧಿ ಸಂಸ್ಥೆ ಎಏನ್ಐಗೆ ತಿಳಿಸಿದ್ದಾರೆ. ಎಏನ್ಐ ಟ್ವೀಟ್ ಮಾಡಿರುವ ಚಿತ್ರದಲ್ಲಿ ಕಂಡು ಬಂದಿರುವಂತೆ ಕಾರಿನಲ್ಲಿ ರಂಧ್ರಗಳನ್ನು ಕಾಣಬಹುದಾಗಿದೆ
ಈ ಘಟನೆಯ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿರುವ ಓವೈಸಿ ಅವರು, ಈ ವಿಷಯದ ಬಗ್ಗೆ ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
"ಈ ಗುಂಡಿನ ದಾಳಿಯ ಘಟನೆಯ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ನಾನು ಚುನಾವಣಾ ಆಯೋಗವನ್ನು ಕೋರುತ್ತೇನೆ. ಸ್ವತಂತ್ರ ತನಿಖೆ ನಡೆಸುವುದು ಯುಪಿ ಸರ್ಕಾರ ಮತ್ತು ಮೋದಿ ಸರ್ಕಾರದ ಜವಾಬ್ದಾರಿಯಾಗಿದೆ. ನಾನು ಈ ವಿಷಯದ ಬಗ್ಗೆ ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡುತ್ತೇನೆ", ಎಂದು ಅಸಾದುದ್ದೀನ್ ಓವೈಸಿ ದೆಹಲಿಯಲ್ಲಿ ಹೇಳಿದ್ದಾರೆ.