ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ, ಕೇರಳದಲ್ಲಿ ಪ್ರಮುಖ ಆರೋಪಿಯ ಬಂಧನ | ಜನತಾ ನ್ಯೂಸ್
ಮಂಗಳೂರು : ಸಾಲೆತ್ತೂರು ಅಗರಿಯಲ್ಲಿನ ವಧುವಿನ ಮನೆಗೆ ಬರುವ ಸಂದರ್ಭ ವರನು ಕೊರಗಜ್ಜ ದೈವವನ್ನು ಹೋಲುವ ರೀತಿಯ ವೇಷ ಭೂಷಣದ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಕೇರಳ ಉಪ್ಪಳ ಅಗರ್ತಿಮೂಲ ಉಮರುಲ್ ಭಾಷಿತ್ (28) ಬಂಧಿತ.
ಹಿಂದೂ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದ ಸಂದರ್ಭ ಪುತ್ತೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಕುಂಬಳೆ ಮಂಗಳಪಾಡಿ ನಿವಾಸಿ ಅಹ್ಮದ್ ಮುಜಿತಾಬು (28), ಗಾಳಿಯಡ್ಕ ಬಾಯಾರುಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿಸಲಾಗಿತ್ತು.
ಮದುವೆ ಸಮಾರಂಭದಲ್ಲಿ ಮದುಮಗನಿಗೆ ದೈವ ಕೊರಗಜ್ಜನ ವೇಷ ಹಾಕಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎನ್ನುವ ಕುರಿತು ದೂರು ದಾಖಲಾಗಿತ್ತು.
ಕೊಳ್ನಾಡು ಗ್ರಾಮದ ಅಬ್ದುಲ್ ಅಝೀಝ್ ಅವರ ಪುತ್ರಿ ಮದುವೆ ದಿನ ಮುಸ್ಲಿಂ ಸಂಪ್ರದಾಯದಂತೆ ವರ ಸ್ನೇಹಿತರ ಜತೆಗೆ ವಧುವಿನ ಮನೆಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜ ದೈವವನ್ನು ಹೋಲುವ ವೇಷ ಭೂಷಣ ಧರಿಸಿದ ದೃಶ್ಯವನ್ನು ವರನ ಕಡೆಯವರೇ ಸೆರೆ ಹಿಡಿದಿದ್ದು, ವೈರಲ್ ಆಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿತ್ತು.