ರಾಜ್ಯದ 25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ದೈವ ಸಂಕಲ್ಪ ಯೋಜನೆ: ಸಚಿವೆ ಶಶಿಕಲಾ ಜೊಲ್ಲೆ | ಜನತಾ ನ್ಯೂಸ್
ಬೆಂಗಳೂರು : ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ರಾಜ್ಯದ ದೇವಸ್ಥಾನ ಅಭಿವೃದ್ಧಿ ಮಾಡುತ್ತೇವೆ ಎಂದು ವಿಕಾಸಸೌಧದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯಲ್ಲಿ ಬಹಳಷ್ಟು ಕಡೆ ಐತಿಹಾಸಿಕ ಹಿನ್ನೆಲೆ ಇರುವ ದೇವಸ್ಥಾನಗಳಿವೆ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ಇಲಾಖೆ ಜವಾಬ್ದಾರಿ ತೆಗೆದುಕೊಂಡ ಬಳಿಕ, ಸಿಎಂ ಜೊತೆ ಚರ್ಚಿಸಿ 25 ಲಕ್ಷ ರೂ. ಮೇಲೆ ಆದಾಯ ಬರುವ ಎ ಗ್ರೇಡ್, ಅದರ ಕೆಳಗಿನ ಆದಾಯ ಇರುವ ಬಿ ಮತ್ತು 5 ಲಕ್ಷ ರೂ. ಕೆಳಗೆ ಆದಾಯ ಇರುವ ದೇವಸ್ಥಾನ ಸಿ ಗ್ರೇಡ್ ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ಕ್ಷೇತ್ರ ಅಭಿವೃದ್ಧಿ ಮಾಡಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಾರ್ಯಕ್ರಮ ಮಾಡಲಿದ್ದೇವೆ. 10 ರಿಂದ 15 ಎ ಗ್ರೇಡ್ ದೇವಸ್ಥಾನ ನೋಡಿದಾಗ ಮಲೆಮಹದೇಶ್ವರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪರಿಶೀಲನೆ ಮಾಡಿದ್ದೇನೆ.
ರಾಜ್ಯದಲ್ಲಿ ಎ ಗ್ರೇಡ್ನಲ್ಲಿ 205 ದೇವಸ್ಥಾನ ಇದೆ. ಮೊದಲ ಹಂತದಲ್ಲಿ ಒಟ್ಟು 25 ದೇವಸ್ಥಾನ ಅಭಿವೃದ್ಧಿ ಮಾಡುತ್ತೇವೆ. ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಸ್ಥಾನ ಅಭಿವೃದ್ಧಿ ಮಾಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಮಲೈಮಹದೇಶ್ವರ ದೇವಸ್ಥಾನಗಳ ರೀತಿ ಅಭಿವೃದ್ಧಿಯಾಗಬೇಕು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನಗಳನ್ನು ನಾವು ಖಾಸಗೀಕರಣ ಮಾಡುತ್ತಿಲ್ಲ. ನಾವು ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುತ್ತಿದ್ದೇವೆ ಅಷ್ಟೇ. ಈ ವಿಚಾರದ ಬಗ್ಗೆ ಇನ್ನು ಯಾವುದೇ ನಿರ್ಧಾರ ಅಂತಿಮವಾಗಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ, ಅಲ್ಲಿನ ದೇವಸ್ಥಾನ ಯಾರ ವ್ಯಾಪ್ತಿಯಲ್ಲಿ ಇದೆ ಅನ್ನುವ ಬಗ್ಗೆ ವರದಿ ತೆಗೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಇನ್ನು ಯಾವುದೇ ನಿರ್ಧಾರ ಅಂತಿಮ ಆಗಿಲ್ಲ ಎಂದು ತಿಳಿಸಿದ್ದಾರೆ.