ತ್ರಿಬಲ್ ತಲಾಕ್ ರದ್ದು ಮಾಡುವ ಮೂಲಕ ಭದ್ರತೆ ಕೊಟ್ಟಿದ್ದು ಮೋದಿ ಸರ್ಕಾರ! | ಜನತಾ ನ್ಯೂಸ್
ಬೆಂಗಳೂರು : ಕಾಪೌಂಡ್ ತನಕ ಹಿಜಾಬ್ ಬುರ್ಕಾ ಹಾಕಿಕೊಂಡು ಬರಲಿ. ಆದ್ರೆ ಶಾಲೆಯ ಒಳಗೆ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ರಾಜ್ಯದ ಶಾಲೆಯಲ್ಲಿ ವಸ್ತ್ರ ಸಂಹಿತೆ ಸಾಂಪ್ರದಾಯಿಕವಾಗಿ ಬಂದಿದೆ. ಕೆಲ ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ಅರಾಜಕತೆ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಇಂಧನ ಮತ್ತು ಕನ್ನಡ-ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿದ್ದಾರೆ.
ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕೆಂದು ಕೆಲವರು ಹೊರಟಿದ್ದಾರೆ. ವಿದ್ಯಾರ್ಥಿಗಳನ್ನು ಛೂಬಿಟ್ಟು ಈ ರೀತಿ ಗೊಂದಲ, ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಆದಿಯಾಗಿ ಕೆಲ ಸಂಘಟನೆ ಹಿಜಾಬ್ ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುತ್ತಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ ಎಂದು ಇಂಧನ, ಕನ್ನಡ ಸಂಸ್ಕೃತಿ ಇಲಾಖೆ, ದಕ್ಷಿಣಕನ್ನಡ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆಗ್ರಹಿಸಿದರು.
ಒಂದು ಕಡೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವವರು ಮತ್ತೊಂದು ಕಡೆ ಶಾಲಾ-ಕಾಲೇಜುಗಳಿಗೆ ಹೀಗೆ ಬಟ್ಟೆ ಧರಿಸಿಕೊಂಡು ಬರಬೇಕು ಎಂದು ಹೇಳುವುದನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ ಎಂದರು.
ತ್ರಿಬಲ್ ತಲಾಕ್ ರದ್ದು ಮಾಡುವ ಮೂಲಕ ಭದ್ರತೆ ಕೊಟ್ಟಿದ್ದು ಮೋದಿ ಸರ್ಕಾರ. ಇದನ್ನು ಮುಸ್ಲಿಂ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಾಡಬೇಡಿ ಎಂದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು. ಯಾರೋ ಶಾಲೆಯ ನೆಪದಲ್ಲಿ ರಾಜಕೀಯ ಮಾಡುವುದು ಬೇಡ ಎಂದರು.