ಭಾರತದ ಗಾನ ಕೋಗಿಲೆ ಹಾಡು ನಿಲ್ಲಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಲತಾ ಮಂಗೇಷ್ಕರ್ ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಅವರು ಹಾಡಿರುವ ಏ ಮೇರಾ ವತನ್ ಕೀ ಹಾಡು ಕೇಳಿದರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ ಎಂದರು. ಈ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ ಎಂದು ತಿಳಿಸಿದ್ದಾರೆ.
ಅವರಿಗೆ ಕನ್ನಡದ ನಂಟು ಸಹ ಇದೆ, ಕನ್ನಡ ಹಾಡು ಸಹ ಹಾಡಿದ್ದಾರೆ. ಭಾರತದ ಗಾನ ಕೋಗಿಲೆ ಹಾಡು ನಿಲ್ಲಿಸಿರುವುದು ಬಹಳ ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಲತಾ ಮಂಗೇಷ್ಕರ್ ಸದಾ ನಮ್ಮ ನೆನಪಿನ ಅಂಗಳದಲ್ಲಿ ಇರಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೋವಿಡ್ ಸೋಂಕು ತಗುಲಿದ್ದ ಲತಾ ಮಂಗೇಷ್ಕರ್ (92) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಾಗಿದ್ದರು. ಐಸಿಯಿನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.