ಕಾಂಗ್ರೆಸ್ ಬ್ರಿಟಿಷರಿಂದ ಒಡೆದು ಆಳುವ ನೀತಿಯನ್ನು ಬಳುವಳಿಯಾಗಿ ಪಡೆದಿದೆ - ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಸಂವಿಧಾನದಲ್ಲಿ ರಾಷ್ಟ್ರ ಎಂಬ ಪದದ ಉಲ್ಲೇಖ ಇಲ್ಲ ಎಂದು ಹೇಳಿದ ಕಾಂಗ್ರೆಸ್ ಮುಖಂಡರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಸುಬ್ರಮಣ್ಯಮ್ ಭಾರತಿ ಸೇರಿದಂತೆ ಹಲವು ಗಣ್ಯರ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ದೇಶದ ಬಗ್ಗೆ ಉಲ್ಲೇಖವನ್ನು ಎತ್ತಿ ತಿರಿಸಿದ್ದಾರೆ. ಅವರು ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಅರ್ಪಿಸುತ್ತಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮಿಳುನಾಡನ್ನು ಪ್ರತ್ಯೇಕ ಎಂಬಂತೆ ತಮ್ಮ ಭಾಷಣದಲ್ಲಿ ಬಿಂಬಿಸಿದ್ದನ್ನು ಉಲ್ಲೇಖಿಸದೇ ಮಾತನಾಡಿದ ಪ್ರಧಾನಿ ಮೋದಿ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವಿನ ಸಂದರ್ಭದಲ್ಲಿ ತಮಿಳುನಾಡಿನ ಜನತೆ ಮೆರೆದ ದೇಶಪ್ರೇಮವನ್ನು ನೆನೆದು, ಇದು ನಮ್ಮ ದೇಶ ಎಂದು ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ಗೆ ಈ ವಿಷಯದಲ್ಲಿ ಯಾವಾಗಲೂ ಭಿನ್ನಾಭಿಪ್ರಾಯವಿದೆ. ಕಾಂಗ್ರೆಸ್ ಬ್ರಿಟಿಷರಿಂದ "ಒಡೆದು ಆಳುವ ನೀತಿ"ಯನ್ನು ಬಳುವಳಿಯಾಗಿ ಪಡೆದಿದೆ. ಆದರಿಂದ, ಕಾಂಗ್ರೆಸ್ ತುಕಡೆ ಗ್ಯಾಂಗ್ ನ ನೇತ್ರತ್ವ ವಹಿಸಿದೆ, ಎಂದಿದ್ದಾರೆ ಪ್ರಧಾನಿ ಮೋದಿ.
ಪ್ರಧಾನಿ ಭಾಷಣಕ್ಕೆ ಮಧ್ಯ ಮಧ್ಯೆ ತಡೆಯುತ್ತಿದ್ದ ಪ್ರತಿ ಪಕ್ಷ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಅವರ ನಡುವಳಿಕೆ ಕುರಿತು ಹೇಳಿದ ಪ್ರಧಾನಿ ಮೋದಿ ಅವರು, "ಸಭಾಧ್ಯಕ್ಷರೇ. ಇವರು ತಮಗೆ ಯಾವಾಗ ಅತಿ ಗಾಡವಾದ ಹೊಡೆತ ಬೀಳುತ್ತಿದೆ ಎಂದು ಗೊತ್ತಾದಾಗಲೆಲ್ಲಾ ತಡೆಯೊಡ್ಡಲು ಪ್ರಯತ್ನಿಸುತ್ತಾರೆ. ಕೆಲವರು(ರಾಹುಲ್ ಗಾಂಧಿ) ಮಾತನಾಡಿ ಹೊರಟು ಹೋಗುತ್ತಾರೆ. ಈ ಪಾಪದವರು ಅದನ್ನು ಅನುಭವಿಸಬೇಕಾಗುತ್ತದೆ," ಎಂದು ಕಾಂಗ್ರೆಸ್ಸಿಗರನ್ನು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ 1971ರಿಂದ ಗರಿಬಿ ಹಟಾವೋ(ಬಡತನ ಓಡಿಸಿ) ಘೋಷಣೆ ಮೇಲೆ ಚುನಾವಣೆ ಗೆಲ್ಲುತ್ತಾ ಇತ್ತು. 40 ವರ್ಷಗಳ ಬಳಿಕವೂ ಬಡತನ ನಿರ್ಮೂಲನೆ ಮಾಡಲಿಲ್ಲ ಆದರೆ ಬಡವರು ಕಾಂಗ್ರೆಸ್ಸನ್ನು ನಿರ್ಮೂಲನ ಮಾಡಿದ್ದಾರೆ. ಕಾಂಗ್ರೆಸ್ ಬಡತನದ ಪರಿಭಾಷೆಯನ್ನೇ ಬದಲಾಯಿಸಿತು. 2013ರಲ್ಲಿ ಒಂದೇ ಹೊಡೆತಕ್ಕೆ ದೇಶದ 17ಕೋಟಿ ಬಡ ಜನರನ್ನು ಶ್ರೀಮಂತರನ್ನಾಗಿಸಿದೆ, ಇದು ಹೇಗಾಯಿತು ದೇಶದ ಯುವಕರಿಗೆ ಗೊತ್ತಾಗಬೇಕು.
ಇಲ್ಲಿ ಬಡತನ ಕಡಿಮೆ ಮಾಡುವ ಬಗ್ಗೆಯೂ ದೊಡ್ಡದೊಡ್ಡ ಅಂಕಿ ಅಂಶಗಳ ಕುರಿತು ಮಾತನಾಡಲಾಯಿತು. ಆದರೆ ಅವರು ಒಂದು ವಿಷಯ ಮರೆತಿದ್ದಾರೆ. ಈ ದೇಶದ ಬಡವರು ತಮ್ಮ ಒಳ್ಳೆಯದಕ್ಕೆ ಕೆಲಸಮಾಡಿದ ಸರ್ಕಾರವನ್ನು ಅಧಿಕಾರದಿಂದ ಹೊರಗೆ ಹಾಕುವಷ್ಟು ವಿಶ್ವಾಸಘಾತುಕರಲ್ಲ. ಇದು ದೇಶದ ಬಡವರ ಸ್ವಭಾವವಲ್ಲ, ಎಂದು ಹೇಳಿದ್ದಾರೆ.
ಕೇವಲ ಘೋಷಣೆ ನಿಡುವ ಮೂಲಕ ಬಡವರನ್ನು ತಮ್ಮ ಕಪಿಮುಷ್ಠಿಯಲ್ಲಿ ಇಡಬಹುದೆಂದು ನಂಬಿದ್ದರಿಂದಲೇ ನಿಮಗೆ ಈ ಧುರ್ಗತಿ ಬಂದಿದೆ. ಆದರೆ, ಬಡವರು ಎಚ್ಚೆರಗೊಂಡಿದ್ದಾರೆ. ಬಡವರು ನಿಮ್ಮನ್ನು ಅರಿತುಕೊಂಡಿದ್ದಾರೆ. ದೇಶದ ಬಡವರು ಎಷ್ಟು ಜಾಗರೂಕರಾಗಿದ್ದಾರೆ ಎಂದರೆ, ನಿಮ್ಮನ್ನು ಕೇವಲ 44 ಸ್ಥಾನಗಳಿಗೆ ತಂದು ನಿಲ್ಲಿಸಿದ್ದಾರೆ, ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.