ಐವರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅಕ್ರಮ ಸಂಬಂಧ! | ಜನತಾ ನ್ಯೂಸ್
ಮಂಡ್ಯ: : ಮಂಡ್ಯದ ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಬಂಧಿತಳನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ಲಕ್ಷ್ಮೀಗೆ ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ತನ್ನ ಚಿಕ್ಕಪ್ಪನ ಮಗಳು ಲಕ್ಷ್ಮಮ್ಮಳ ಗಂಡ ಗಂಗಾರಾಮ್ ಮೇಲೆ ವ್ಯಾಮೋಹವಿತ್ತು. ಈಕೆ ಜತೆಗಿನ ಅಕ್ರಮ ಸಂಬಂಧ ಮುಂದುವರಿಸಲು ಗಂಗಾರಾಮ್ ಒಲ್ಲೆ ಎಂದಿದ್ದಕ್ಕೆ ಕುಪಿತಗೊಂಡ ಲಕ್ಷ್ಮೀ, ತನ್ನ ತಂಗಿಯನ್ನೇ ಮುಗಿಸಲು ಸಂಚು ರೂಪಿಸಿದ್ದಳು.
ಫೆ.5ರ ರಾತ್ರಿ ಕೆ.ಆರ್.ಎಸ್. ಗ್ರಾಮದ ಬಜಾರ್ ಲೈನ್ನಲ್ಲಿರುವ ಗಂಗಾರಾಮ್ ಮನೆಗೆ ಮೈಸೂರಿಂದ ಬಂದ ಲಕ್ಷ್ಮೀ, ಮನೆಯಲ್ಲಿದ್ದ ಗಂಗಾರಾಮ್ನ ಪತ್ನಿ ಲಕ್ಷ್ಮಮ್ಮ(30) ಮತ್ತು ಇವರ ಮಕ್ಕಳಾದ ರಾಜ್(12), ಕೋಮಲ್(8), ಕುನಾಲ್(5) ಹಾಗೂ ಗಂಗಾರಾಮ್ ಅವರ ಸಹೋದರನ ಮಗ ಗೋವಿಂದ(10) ಸೇರಿ ಐವರನ್ನೂ ಭೀಕರವಾಗಿ ಕೊಂದು, ಮೂರ್ನಾಲ್ಕು ತಾಸು ಶವಗಳ ಜತೆಯೇ ಇದ್ದು ಬಳಿಕ ಸ್ಕೂಟರ್ನಲ್ಲಿ ಮೈಸೂರಿಗೆ ತೆರಳಿದ್ದಳು.
ಮುಂಜಾನೆ 4.20ರ ಸುಮಾರಿಗೆ ಕೆ.ಆರ್.ಎಸ್.ನಿಂದ ಆಕ್ವಿವಾದಲ್ಲಿ ನಿರ್ಗಮಿಸಿರುವ ವಿಡಿಯೋ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಮೃತಳ ಗಂಡ ಗಂಗಾರಾಮ್ ಹೇಳಿಕೆ :
ನನ್ನ ಪತ್ನಿ, ನನ್ನ ಮೂವರು ಮಕ್ಕಳು ಹಾಗೂ ನನ್ನ ಅಣ್ಣನ ಮಗನನ್ನು ಕೊಂದ ಲಕ್ಷ್ಮೀ ನನ್ನ ಸಂಬಂಧಿ. ಆಕೆ ಬಾಲ್ಯದಲ್ಲೇ ಶಿಕ್ಷಕರೊಬ್ಬರ ಜತೆ ಓಡಿ ಹೋಗಿದ್ದಳು. ನನಗೆ ಬೇರೊಬ್ಬರ ಜತೆ ಮದ್ವೆ ಆಯ್ತು. ಬಳಿಕ ಆಕೆಗೂ ಬೇರೊಬ್ಬನ ಜತೆ ಮದುವೆ ಆಯ್ತು. ನನಗೆ ಮದ್ವೆ ಆಗಿ ಹೆಂಡ್ತಿ -ಮಕ್ಕಳು ಇದ್ದರೂ ಆಕೆ ನನನ್ನು ಇಷ್ಟ ಪಡುತ್ತಿದ್ದಳು. ನಮ್ಮಿಬ್ಬರ ನಡುವೆ ಆಫೇರ್ ಇತ್ತು. ಈ ವಿಚಾರ ಗೊತ್ತಾಗಿ ಹಿರಿಯರೆಲ್ಲ ನ್ಯಾಯ ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ದರು. ನಮ್ಮ ಸಂಪ್ರದಾಯದ ಪ್ರಕಾರ ಸೀರೆ ಹಾಕಿದರೆ ಅಣ್ಣ-ತಂಗಿ ಆಗುತ್ತೇವೆ. ಸೀರೆ ಹಾಕಿದ ಬಳಿಕ ನಾನು ನನ್ನ ಪಾಡಿಗೆ ಹೆಂಡ್ತಿ-ಮಕ್ಕಳ ಜತೆ ಇದ್ದೆ. ಆದರೂ ಬಿಡದ ಆಕೆ, ಬೇರೆ ನಂಬರ್ನಿಂದ ಕಾಲ್ ಮಾಡಿ ನನಗೆ ಮತ್ತು ನನ್ನ ಪತ್ನಿಗೆ ಟಾರ್ಚರ್ ಕೊಡ್ತಿದ್ಲು. ಅದು ನನ್ನ ಸಂಬಂಧಿ ಲಕ್ಷ್ಮಿಯೇ ಅನ್ನೋದು ಮಾತ್ರ ನನಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿ- ಮಕ್ಕಳೊಂದಿಗೆ ಚೆನ್ನಾಗಿದ್ದೆ. ಈಗ ಅವರನ್ನೆಲ್ಲ ಈಕೆ ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ… ಎಂದಿದ್ದಾರೆ.