ವಜಾಗೊಂಡ ಸಾರಿಗೆ ನೌಕರರ ನೇಮಕ: ಸಾರಿಗೆ ಸಚಿವ ಬಿ.ಶ್ರೀರಾಮುಲು | ಜನತಾ ನ್ಯೂಸ್
ಬೆಂಗಳೂರು : ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಹೇಳುವ ಮೂಲಕ, ಸಾರಿಗೆ ಸಚಿವರು ಪ್ರಯಾಣಿಕರು ಹಾಗೂ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಪ್ರತಿಭಟನೆ ನಡೆಸಿ ನೌಕರರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಜಾಗೊಂಡವರನ್ನು ಹಂತ ಹಂತವಾಗಿ ಮರುನೇಮಕ ಮಾಡಲಾಗುತ್ತದೆ. ಈಗ ನೇಮಕಗೊಂಡವರು ಇನ್ನುಮುಂದೆ ಮುಷ್ಕರಕ್ಕೆ ಹೋಗಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರು.
ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ.ಮರು ನೇಮಕ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ನಿಮ್ಮ ಕುಟುಂಬವನ್ನು ನೋಡಿ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಮ್ಮ ಜೊತೆ ಮುಷ್ಕರ ಮಾಡಿದವರು ಓಡಿ ಹೋದರು. ಇಂದು ನಿಮ್ಮ ಜೊತೆ ನಿಂತಿದ್ದು ಸರ್ಕಾರ. ಮುಖ್ಯ ಮಂತ್ರಿ ಅಣತಿ ಮೇರೆಗೆ ಇದೀಗ ಮರು ನೇಮಕಾತಿ ಆಗುತ್ತಿದೆ ಎಂದರು.
ಮತ್ತೆ ತಪ್ಪು ಮಾಡಲು ಹೋಗಬೇಡಿ.ಮುಂದಿನ ತಿಂಗಳಿಂದ ಸರಿಯಾದ ಸಂಬಳ ನೀಡುತ್ತೇವೆ.ಮತ್ತೆ ಮುಷ್ಕರ ಮಾಡುತ್ತೇವೆ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ.ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಇಂದು 100 ನಾಳೆ 200 ಜನರನ್ನು ಮರು ನೇಮಕ ಮಾಡಲಾಗುತ್ತದೆಉಳಿದ ಎಲ್ಲರನ್ನೂ ಈ ತಿಂಗಳ ಒಳಗಾಗಿ ಮರು ನೇಮಕ ಮಾಡಲಾಗುತ್ತದೆ ಎಂದರು.
ಈಗ ನೇಮಕಗೊಂಡವರು ಇನ್ನು ಮುಂದೆ ಮುಷ್ಕರಕ್ಕೆ ಹೋಗಬಾರದು ಎಂದು ಷರತ್ತು ವಿಧಿಸಲಾಗಿದೆ. ನೌಕರರು ಮುಷ್ಕರಕ್ಕೆ ಹೋದರೆ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ ಸಚಿವರು, ಸದ್ಯಕ್ಕೆ ಕ್ರಿಮಿನಲ್ ಕೇಸ್ ಎದುರಿಸುತ್ತಿರುವರನ್ನು ನೇಮಕ ಮಾಡಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದರು. ನಿಮ್ಮನ್ನು ಕೆಲವು ಸಂಘಟನೆಗಳು ಮತ್ತು ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡುತ್ತಾರೆ. ರಕ್ಷಣೆ ಮಾಡುವುದು ಯಾರು ಎಂದು ಪ್ರಶ್ನಿಸಿದರು.
ಎಲೆಕ್ಟ್ರಿಕ್ ಬಸ್ ಬಂದರೂ ಸಾರಿಗೆ ನಿಗಮದ ಚಾಲಕರನ್ನು ಕೈ ಬಿಡುವುದಿಲ್ಲ. ಎಷ್ಟೇ ಎಲೆಕ್ಟ್ರಿಕ್ ಬಸ್ ಬಂದರೂ ಇರುವ ಚಾಲಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.