ಕಮ್ಮಾಣಿ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ | Janata.news
ಅಂಕೋಲಾ : ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಮ್ಮಾಣಿ ಗ್ರಾಮದ ದೊಡ್ಡಕಟ್ಟಿನ ಹಸೆಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಹಾಗೂ ಈ ಭಾಗದಲ್ಲಿ ಗ್ರಾಮ ಪಥ ಯೋಜನೆಯಲ್ಲಿ ಸಿದ್ಧಿ ಜನಾಂಗಕ್ಕೆ ಮಂಜೂರಾದ ಅನುದಾನ ಬದಲಿಸಿದ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿ ಸಿದ್ಧಿ ಸಮುದಾಯದ ಜನರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 40 ವರ್ಷಗಳಿಂದ ಕಮ್ಮಾಣಿ ಗ್ರಾಮದ ದೊಡ್ಡಕಟ್ಟಿನಲ್ಲಿ ಸಿದ್ಧಿ ಜನಾಂಗದ ಅನೇಕ ಕುಟುಂಬಗಳು ವಾಸಿಸುತ್ತಿವೆ. ಗ್ರಾಮಕ್ಕೆ ಮೂಲ ಸೌಕರ್ಯವಾದ ಸೇತುವೆ ಹಾಗೂ ರಸ್ತೆ ಅನುಕೂಲತೆ ಈವರೆಗೂ ಲಭ್ಯವಾಗಿಲ್ಲ. ಗ್ರಾಮ ಪಥ ಯೋಜನೆಯ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರಲ್ಲಿ ಹಸೆಹಳ್ಳಕ್ಕೆ ಸೇತುವೆ ಮಂಜೂರಾಗಿದ್ದು, ಈ ಕಾಮಗಾರಿಯನ್ನು ಶಿರಸಿ ತಾಲೂಕಿನ ಮತ್ತಿಘಟ್ಟಾಕ್ಕೆ ಬದಲಾಯಿಸಲಾಗಿದೆ. ದೊಡ್ಡಕಟ್ಟು ಗ್ರಾಮದಲ್ಲಿ ವಾಸಿಸುವ ಸಿದ್ಧಿ ಸಮುದಾಯದ ಜನರು ಸೌಕರ್ಯ ವಂಚಿತರಾಗಿ ಬದುಕುತ್ತಿದ್ದಾರೆ. ಶಾಲೆಗೆ ತೆರಳಲು ಮಕ್ಕಳು ಪರದಾಡುವಂತಹ ಸಮಸ್ಯೆಯಿದೆ. ಸಿದ್ಧಿ ಸಮುದಾಯಕ್ಕೆ ಮಂಜೂರಾದ ಅನುದಾನವನ್ನು ಸಿದ್ಧಿ ಜನಾಂಗ ಹೊರತುಪಡಿಸಿ ಉಳಿದ ಸಮುದಾಯದ ಜನರಿರುವ ಕಡೆ ವರ್ಗಯಿಸಿದ್ದು ಎಷ್ಟು ಸರಿ ಎಂಬುದು ಅರ್ಥವಾಗಿಲ್ಲ. ಈ ಬಗ್ಗೆ ಜನಪ್ರತಿನಿಗಳು, ಅಕಾರಿಗಳ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಜಿಲ್ಲಾಕಾರಿಯವರು ಸ್ವತಃ ಸ್ಥಳ ಪರಿಶೀಲಿಸಿ ಹಸೆಹಳ್ಳಕ್ಕೆ ಸೇತುವೆ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ದೊಡ್ಡಕಟ್ಟು ಗ್ರಾಮಕ್ಕೆ ಮಂಜೂರಾದ ಅನುದಾನ ಇದೇ ಗ್ರಾಮಕ್ಕೆ ಬಳಕೆಯಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಅಣ್ಣಪ್ಪ ಆರ್.ಸಿದ್ಧಿ, ಮಂಜುನಾಥ ಸಿದ್ಧಿ, ಸುಜಾತಾ ಸಿದ್ಧಿ, ಲಕ್ಷ್ಮೀ ಸಿದ್ಧಿ, ರಾಧಾ ಸಿದ್ಧಿ, ಗೀತಾ ಸಿದ್ಧಿ, ಸಾವಿತ್ರಿ ಸಿದ್ಧಿ ಮುಂತಾದವರು ಹಾಜರಿದ್ದರು.