ಮಂದಿರ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವವರ ವಿರುದ್ಧ ಕಠಿಣ ಕ್ರಮ | ಜನತಾ ನ್ಯೂಸ್
ಬೆಂಗಳೂರು : ಮಂದಿರ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಟ್ವಿಟರ್ ಲೈವ್ನಲ್ಲಿ ಮಾತನಾಡಿದ ಕಮಿಷನರ್ ಜತೆ ನಗರದ ಜನರು ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದು, ಅವರು ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜತೆಗೆ, ಕೆಲವು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಕೂಡ ನೀಡಿದರು.
ಮಲ್ಲೇಶ್ವರದ ಮಸೀದಿಯೊಂದರಲ್ಲಿ ಪ್ರತಿ ನಿತ್ಯ ಕೇಳಿ ಬರುತ್ತಿರುವವ ಅಜಾನ್ ಶಬ್ದಕ್ಕೆ ಸಂಬಂಧಪಟ್ಟಂತೆ ನಾಗರೀಕರೊಬ್ಬರು ಕಮಲ್ ಪಂತ್ಗೆ ದೂರು ನೀಡಿದ ವೇಳೇಯಲ್ಲಿ ಅವರು ಪ್ರತಿಕ್ರಿಯೆ ನೀಡಿ. ಡೆಸಿಬಲ್ನ ಮಿತಿಯನ್ನು ಮೀರಿ ಶಬ್ದ ಮಾಲಿನ್ಯ ಮಾಡಿದ್ರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಮಂದಿರ, ಮಸೀದಿಗಳ ಧ್ವನಿವರ್ಧಕಗಳನ್ನು ಕಾನೂನು ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗುವುದು ಅಂತ ಹೇಳಿದರು.
ಮಂದಿರ-ಮಸೀದಿಗಳ ಧ್ವನಿವರ್ಧಕಗಳ ಶಬ್ದ ನಿಗದಿತ ಡೆಸಿಬಲ್ ಒಳಗೇ ಇರಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದಾಗ್ಯೂ ಅತಿಯಾದ ಶಬ್ದ ಹೊರಹೊಮ್ಮಿಸುತ್ತಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.