ಹಿಂದೂ ಕಾರ್ಯಕರ್ತನ ಹತ್ಯೆ, ಮೃತದೇಹದ ಮೆರಣಿಗೆ: ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ | ಜನತಾ ನ್ಯೂಸ್
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷನ ಮನೆ ಬಳಿಗೆ ಮೃತದೇಹ ತರಲಾಗಿದ್ದು, ಅಂತಿಮ ಯಾತ್ರೆ ಮೆರವಣಿಗೆ ವೇಳೆ ಉದ್ರಿಕ್ತರ ಗುಂಪು ಬೈಕ್ಗೆ ಬೆಂಕಿ ಹಚ್ಚಿ, ಕಾರುಗಳ ಗಾಜನ್ನು ಪುಡಿಪುಡಿ ಮಾಡಿದೆ.
ಈ ನಡುವೆ ಮೃತದೇಹವನ್ನು ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ ನಡೆಸಲು ತೆಗೆದುಕೊಂಡು ಹೋಗಲಾಗಿದ್ದು, ಈ ವೇಳೆ ಭಾರೀ ಜನಸ್ತೋಮ ನೆರೆದಿದ್ದರು. ಸೆಕ್ಷನ್ 144 ನಡುವೆಯೂ ಆಸ್ಪತ್ರೆಯಿಂದ ಮನೆಗೆ ಶವಯಾತ್ರೆ ನಡೆಸುವ ವೇಳೆ ಅಹಿತಕರ ಘಟನೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ವಾಹನಗಳಿಗೆ ತಗುಲಿರುವ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ವಾಹನಗಳಿಗೆ ಬೆಂಕಿ ಇಡುವುದರ ಜೊತೆಗೆ ನಿರಂತರವಾಗಿ ಕಲ್ಲು ತೂರಾಟ ನಡೆಸಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಲಾಗುತ್ತಿದೆ.
ಆಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಚದುರಿಸಲು ಯತ್ನಿಸಿದ್ದಾರೆ. ಜೊತೆಗೆ 2 ಬೈಕ್ಗಳಿಗೆ ಹಾಗೂ ಕಾರುಗಳಿಗೆ ಬೆಂಕಿಯನ್ನು ಹಚ್ಚಿದ್ದಾರೆ. ಕಲ್ಲು ತೂರಾಟದಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಕಳೆದ ರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತ 24 ವರ್ಷದ ಹರ್ಷ ಎಂಬ ಯುವನಕನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಯುವಕನ ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ಎರಡು ಗುಂಪಿನ ನಡುವೆ ಕಲ್ಲು ತೂರಾಟ ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಈ ಹಿನ್ನೆಲೆ ಶಿವಮೊಗ್ಗ ನಗರಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದರು.