5ನೇ ಮೇವು ಹಗರಣದ ತೀರ್ಪು : ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ 5 ವರ್ಷಗಳ ಜೈಲು, ರೂ.60 ಲಕ್ಷ ದಂಡ | ಜನತಾ ನ್ಯೂಸ್
ರಾಂಚಿ : ಐದನೇ ಮೇವು ಹಗರಣ ಪ್ರಕರಣದ ತೀರ್ಪು ನೀಡಿರುವ ರಾಂಚಿಯ ಸಿಬಿಐ ಕೋರ್ಟ್ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಾಲೂ ಅವರ ಪುತ್ರ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು, "ಲಾಲೂ ಜಿ ಬಿಜೆಪಿಯೊಂದಿಗೆ ಕೈಕುಲುಕುತ್ತಿದ್ದರೆ ಅವರನ್ನು ರಾಜಾ ಹರಿಶ್ಚಂದ್ರ ಎಂದು ಕರೆಯುತ್ತಿದ್ದರು. ಆದರೆ ಇಂದು ಅವರು ಆರ್ಎಸ್ಎಸ್-ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಆದ್ದರಿಂದ ಅವರು ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ನಾವು ಹೆದರುವುದಿಲ್ಲ. ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಇದು ಕೊನೆಯ ತೀರ್ಪು ಅಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇವೆ. ನಾವು ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದೇವೆ ಮತ್ತು ಕೆಳ ನ್ಯಾಯಾಲಯದ ತೀರ್ಪು ಹೈಕೋರ್ಟ್ನಲ್ಲಿ ಬದಲಾಗುತ್ತದೆ ಎಂದು ನಾವು ಭಾವಿಸುತ್ತೇವೆ", ಎಂದಿದ್ದಾರೆ.
ಬಿಹಾರ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರು ತೇಜಸ್ವಿ ಯಾದವ್ ಅವರನ್ನು ತರಾಟೆ ತೆಗೆದುಕೊಂಡಿದ್ದು, "ಐದನೇ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಭಾರತೀಯರಾದ ನಮಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ಬಿಜೆಪಿ ಬಗ್ಗೆ ಯಾವುದೇ ಹೇಳಿಕೆ ನೀಡುವ ಮುನ್ನ ತೇಜಸ್ವಿ ಯಾದವ್ ತನ್ನೊಳಗೆ ನೋಡಿಕೊಳ್ಳಬೇಕು, ಎಂದಿದ್ದಾರೆ.