ಪತ್ರಿಕೆಗಳ ಮುಂದೆ ಕಠಿಣ ಕ್ರಮದ ಹೇಳಿಕೆ ಸಾಲಲ್ಲ - ತಮ್ಮದೇ ಸರ್ಕಾರದ ಮೇಲೆ ನಾಚಿಕೆ ವ್ಯಕ್ತಪಡಿಸಿದ ಸಂಸದ ಸಿಂಹ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಹೊರತಾಗಿಯೂ ಭಜರಂಗದಳದ ಕಾರ್ಯಕರ್ತ ಹರ್ಷನ ಬರ್ಬರ ಹತ್ಯೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ತೀವ್ರ ಅಕ್ರೋಶ ಹೊರಹಾಕಿದ್ದಾರೆ.
ನನಗೆ ಅತಿವ ವೇಧನೆ ಆಗುತ್ತಿದೆ, ಹಾಗೆಯೇ, ನಮ್ಮದೇ ಸರ್ಕಾರ ಬಂದ ಮೇಲೂ ನಮ್ಮ ಹಿಂದೂ ಕಾರ್ಯಕರ್ತರ ಈ ರೀತಿ ಬೀದಿಯಲ್ಲಿ ಕಗ್ಗೊಲೆಯಾಗುತ್ತಿರುವುದು ನನಗೆ ನಾಚಿಕೆ ಆಗುತ್ತಿದೆ, ಎಂದು ಹೇಳಿದ್ದಾರೆ.
ಈ ಹಿಂದೆ ಬಂಟ್ವಾಳದಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾಯಿತು. ಆದಾದ ಮೇಲೆ ಸುರತ್ಕಲ್ ನಲ್ಲಿ ದೀಪಕ್ ರಾಮ್ ಹತ್ಯೆ, ಬೆಂಗಳೂರಲ್ಲಿ ಸಂತೋಷ ಹತ್ಯೆ, ಮಡಿವಾಳ ಅವರ ಹತ್ಯೆ, ಮೈಸೂರಲ್ಲಿ ರಾಜು ಹತ್ಯೆ, ಕುಶಾಲನಗರದಲ್ಲಿ ಪ್ರವೀಣ್ ಪೂಜಾರಿ ಮತ್ತು ಕುಟ್ಟಪ್ಪ ಹತ್ಯೆ ಹಾಗೆ ಉತ್ತರ ಕನ್ನಡದಲ್ಲಿ ಪರೇಶ್ ಮೇಸ್ತ ಹತ್ಯೆ ಆಯಿತು. ಪ್ರತಿ ಹತ್ಯೆ ನಡೆದಾಗಲೂ ನಾವು ಎಸ್ಡಿಪಿಐ ನು, ಕೆಎಫ್ಡಿ ಹಾಗೂ ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರನ್ನೂ ಬೈಯುತ್ತಾ ಇದ್ವಿ. ಇವರೇ ಕಾರಣ ಎಸ್ಡಿಪಿಐ ನು, ಕೆಎಫ್ಡಿ ವಿರುದ್ಧ 175 ಕ್ರಿಮಿನಲ್ ಪ್ರಕರಣವನ್ನು ಕ್ಯಾಬಿನೆಟ್ ಮುಂದೆ ಇಟ್ಕೊಂಡು ವಜಾ ಮಾಡಿದ್ದಾರೆ, ಎಂದು ಸಿದ್ದರಾಮಯ್ಯ ಸರ್ಕಾರವನ್ನು ಬೈಯುತ್ತಾ ಇದ್ದೆವು.
ಈಗ ನಮ್ಮ ಕಾರ್ಯಕರ್ತರು ಕಷ್ಟಪಟ್ಟು 104 ಸ್ಥಾನವನ್ನು ಬಿಜೆಪಿಗೆ ತಂದುಕೊಟ್ಟು, ಈಗ ನಮ್ಮ ಸರ್ಕಾರ ಬಂದ ಮೇಲೂ ಕೂಡ ಮಂಗಳೂರು ಗಲಭೆ, ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಗಳಲ್ಲಿ ಹಿಂದೂ ಗಳನ್ನು ಹುಡುಕಿ ಹೊಡೆಯುವ ಪ್ರಸಂಗ ಸಂಭವಿಸಿತು. ಆಗ ಕೂಡ ತಪ್ಪಿತಸ್ಥರು ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲ ಎಂದಿದ್ದರು. ಎಸ್ಡಿಪಿಐ ನು, ಕೆಎಫ್ಡಿ ನು ಬ್ಯಾನ್ ಮಾಡಬೇಕು ಎಂದು ಸರ್ಕಾರ ಭಾವನೆ ವ್ಯಕ್ತ ಮಾಡಿತ್ತು.
ಈಗ ಹಿಜಾಬ್ ವಿಚಾರ ಬಂದಾಗ ರಾಜ್ಯಾದ್ಯಂತ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ, ಹೈಕೋರ್ಟ್ನ ಮಧ್ಯಂತರ ಆದೇಶದ ಪಾಲನೆ ಆಗ್ತಿಲ್ಲ. ಶಾಂತಿಗೆ ಭಂಗ ತರೋರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. 144 ಸೆಕ್ಷನ್ ಇದ್ದರೂ, ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಹರ್ಷ ಕೊಲೆ ಆಗಿದೆ, ಎಂದು ಸಿಂಹ ತಮ್ಮದೇ ಸರ್ಕಾರವನ್ನು ಆಪಾದಿಸಿದ್ದಾರೆ.
ನಮ್ಮ ಸರ್ಕಾರ ಬಂದಾದ ಮೇಲೂ ನಾವು ಎಸ್ಡಿಪಿಐ, ಕಾಂಗ್ರೆಸ್ ನ್ನು ದೂಷಿಸುವುದಾದರೆ ನಮ್ಮ ಕಾರ್ಯಕರ್ತರು ಕಷ್ಟಪಟ್ಟು ನಮಗೆ ಯಾಕೆ ಸರ್ಕಾರ ಕೊಟ್ರು? ಹಿಂದಿನ ಗಲಭೆಗಳಾದಾಗ ಬೊಮ್ಮಾಯಿ ಅವರು ಗೃಹ ಮಂತ್ರಿಯಾಗಿದ್ದರು. ಅವರಿಗೆ ಗೊತ್ತಿದೆ ಎಸ್ಡಿಪಿಐ ಕೇರಳ ಮಾದರಿ ಹತ್ಯೆಗಳನ್ನು ರಾಜ್ಯಕ್ಕೆ ತಂದಿದ್ದಾರೆ ಎಂದು ಗೊತ್ತಿದೆ ಅವರಿಗೆ. ಇನ್ನಾದರೂ ಕ್ರಮ ಕೈಗೊಳ್ಳಿ. ಬ್ಯಾನ್ ಮಾಡಿ, ಎಂದು ಒತ್ತಾಯ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಮಾತು ನಿಲ್ಲಿಸಿ, ಕಠಿಣತೆಯನ್ನು ತೋರಿಸಲಿ ಎಂದು ಭಾವೋದ್ವೇಗದಿಂದ ಪ್ರತಾಪ್ ಸಿಂಹ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಮಾತು ನಿಲ್ಲಿಸಿ, ಕೃತಿಯಲ್ಲಿ ಕಠಿಣತೆ ತೋರಲಿ, ಎಂದು ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗಲೂ ಕಾಂಗ್ರೆಸ್ ನ್ನು ನಿಂದಿಸುತ್ತಿದ್ದೆವು. ಈಗ ನಮ್ಮ ಸರ್ಕಾರ ಇದ್ದರೂ ನಮ್ಮದೇ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಇದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ನಮ್ಮ ಹಿಂದೂ ಕಾರ್ಯಕರ್ತ ಹತ್ಯೆಯಾಗಿದ್ದಾನೆ ಸರ್ಕಾರ ಇನ್ನು ಯಾವಾಗ ಕ್ರಮ ಕೈಗೊಳ್ಳಲಿದೆ? ಎಂದು ಪ್ರಶ್ನಿಸಿದ್ದಾರೆ. ಸಿಎಂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಲಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.