ಸೂರಜ್ ನಾಯ್ಕ ಸೋನಿ ಬಿಡುಗಡೆಗೆ ಪೂಜೆ ಹೋಮ ಮುಂದುವರೆಸಿದ ಗ್ರಾಮಸ್ಥರು | Janata.news
ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳಸಾಗಾಣಿಕೆ ನಡೆಸಿದ್ದವರ ಮೇಲೆ ಕೆಲವರು ಹಲ್ಲೇ ನಡೆಸಿದ್ದರು ಎಂಬ ಅನುಮಾನದಿಂದ, ಪೋಲಿಸರು ಅನೇಕ ಹಿಂದೂ ಮುಖಂಡರ ಮೇಲೆ 307 ಕೇಸ್ ದಾಖಲಿಸಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ ಬಂಧನಕ್ಕೊಳಗೊಂಡು ಎರಡು ವಾರಗಳೇ ಸಮೀಪಿಸುತ್ತಿದ್ದು, ಇನ್ನೂ ಬಂಧನ ಮುಕ್ತವಾಗಿರುವುದಿಲ್ಲ. ಆದ ಕಾರಣ, ಅವರ ಅಭಿಮಾನಿಗಳು ಏನೂ ದಿಕ್ಕು ತೋಚದೇ ದೇವರ ಮೊರೆ ಹೋಗಿ ಹೋಮ ಹವನದಲ್ಲಿ ತೊಡಗಿದ ಹಾಗೆ ತೋರುತ್ತಿದೆ. ನಿನ್ನೆ ಮಾರ್ಚ್ 27ರಂದು ಕುಮಟಾ ತಾಲೂಕಿನ ದೀವಗಿಯಲ್ಲಿ ಈ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ.
ಸೂರಜ್ ನಾಯ್ಕ ಸೋನಿ ಶೀಘ್ರ ಬಿಡುಗಡೆಯಾಗಲಿ ಎಂದು ಇಲ್ಲಿನ ದೀವಗಿಯ ಗ್ರಾಮಸ್ಥರು ಹಾಗೂ ಸೂರಜ್ ಸೋನಿ ಅಭಿಮಾನಿಗಳು ದೇವರ ಪೂಜೆ ಹಾಗೂ ಹೋಮ ನಡೆಸಿ ಪ್ರಾರ್ಥನೆಸಲ್ಲಿದ್ದರೆಂದು ತಿಳಿದು ಬಂದಿದೆ. ಜಿಲ್ಲೆಯ ಬಿಜೆಪಿ ಮುಖಂಡರಾದ ನಾಗರಾಜ್ ನಾಯಕ ತೋರ್ಕೆ ಹಾಗೂ ಸೂರಜ್ ನಾಯ್ಕ ಸೋನಿ ಅಭಿಮಾನಿಗಳಾದ ಅನೇಕರು ಈ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು, ಎಂದು ಹೇಳಲಾಗಿದೆ.
ಸೂರಜ್ ನಾಯ್ಕ ಸೋನಿಯವರ ಜಾಮೀನಿಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಯು ಬರುವ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.