ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿ! | ಜನತಾ ನ್ಯೂಸ್
ಬೆಂಗಳೂರು : ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿ ರಾಜ್ಯಕ್ಕೆ ಕರೆತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, "ಕೇಂದ್ರ ಸರಕಾರವು ಎಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಹುಡುಕಿ ಕನ್ನಡಿಗರನ್ನು ವಾಪಸ್ ಕರೆತರಬೇಕು" ಎಂದಿದ್ದಾರೆ.
ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರಕಾರವೇ ನೀಡಿದೆ. ಆ ದೇಶದ ಕೀವ್ ನಗರ ಸೇರಿ ವಿವಿಧೆಡೆ ಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಎಲ್ಲ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕು.
ಶೆಲ್, ಕ್ಷಿಪಣಿ, ಬಾಂಬ್ ದಾಳಿ ಭೀತಿಯಿಂದ ವಿದ್ಯಾರ್ಥಿಗಳು ಬಂಕರ್ ಗಳಲ್ಲಿ & ಮೆಟ್ರೋ ರೈಲು ಅಂಡರ್ ಗ್ರೌಂಡ್ ನಲ್ಲಿ ಆಶ್ರಯ ಪಡೆದಿದ್ದಾರೆ. ಆ ದೃಶ್ಯಗಳು ಕಳವಳಕಾರಿ. ಸ್ಫೋಟದ ಸದ್ದು ಕೇಳಿಸಿಕೊಂಡು ಕ್ಷಣಕ್ಷಣಕ್ಕೂ ಭಯಭೀತಿಯಲ್ಲಿರುವ ಅವರೆಲ್ಲರನ್ನು ನೋಡಿದರೆ ಯುದ್ಧದ ಭೀಕರತೆ ಎಂಥದ್ದು ಎಂಬುದನ್ನು ಅರಿಯಬಹುದು.
ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ, ಇಲ್ಲಿ ಅವರ ತಂದೆ - ತಾಯಿ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಉಕ್ರೇನ್ ನಲ್ಲಿ ಬಾಂಬ್ ಗಳ ಮೊರೆತಕ್ಕೆ ಅವರು ಮತ್ತಷ್ಟು ಕಂಗಾಲಾಗುತ್ತಿದ್ದಾರೆ.
ನಾನು ಕೂಡ ಕನ್ನಡಿಗರ ರಕ್ಷಣೆಗೆ ನೇಮಕಗೊಂಡಿರುವ ಉಸ್ತುವಾರಿ ಅಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರ್ಕಾರವು ತನ್ನೆಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್ ನಲ್ಲಿರುವ ಎಲ್ಲ ಕನ್ನಡಿಗರನ್ನೂ ಏರ್ ಲಿಫ್ಟ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.