ಉಕ್ರೇನ್ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ಕರೆ ಮಾಡಿ ಸಾಂತ್ವನ ಹೇಳಿದ ಸಿಎಂ | ಜನತಾ ನ್ಯೂಸ್
ಹಾವೇರಿ : ಉಕ್ರೇನ್ನ ಖಾರ್ಕಿವ್ ನಲ್ಲಿ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಇಂದು ಬೆಳಗ್ಗೆ ಫೋನ್ನಲ್ಲಿ ಮಾತನಾಡಿದ ನವೀನ ಮತ್ತೆ ಫೋನ್ ಎತ್ತಿಲ್ಲ. ಎಂಬಿಬಿಎಸ್ ಕಲಿತು ಬರುತ್ತೇನೆ ಎಂದು ಹೇಳಿ ಹೋಗಿದ್ದೆಲ್ಲೋ ಎಂದು ಮೃತನ ತಾಯಿ ವಿಜಯಲಕ್ಷ್ಮಮ್ಮ ಹಾಗೂ ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಸಿಎಂ ಬಸವರಾಜ ಬೊಮ್ಮಾಯಿ ಆವರು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. ದೂರವಾಣಿಯಲ್ಲಿ ಮಾತನಾಡಿ ಸಾವನ್ನಪ್ಪಿದ ನವೀನ್ ಬಗ್ಗೆ ಮಾಹಿತಿ ಪಡೆದ ಸಿಎಂ, ಇದು ನಿಜಕ್ಕೂ ದೊಡ್ಡ ದುರಂತ, ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನಿಮ್ಮ ಕುಟುಂಬ ಧೈರ್ಯದಿಂದ ಇರಬೇಕು, ಎಂದು ಸಾಂತ್ವಾನ ಹೇಳಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಅವರ ಕುಟುಂಬ ನನಗೆ ಗೊತ್ತು. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ಪ್ರಧಾನಿ ಮೋದಿ ಕೂಡ ಕುಟುಂಬದವರೊಂದಿಗೆ ಮಾತನಾಡಿದ್ದರು. ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮೃತದೇಹವನ್ನು ಪಡೆದುಕೊಳ್ಳಲು ಸಹಾಯ ಮಾಡುವಂತೆ ನಾನು ಪ್ರಧಾನಿ ಕಾರ್ಯಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದೇನೆ, ಎಂದು ತಿಳಿಸಿದ್ದಾರೆ.
ನವೀನನ ತಂದೆಗೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನೀವು ಧೈರ್ಯವಾಗಿರಿ. ನಾವು ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವೇ ಧೈರ್ಯ ಕಳಕೊಂಡ್ರೆ ಕುಟುಂಬದ ಸ್ಥಿತಿ ಹೇಗೆ? ಎಂದು ಯಡಿಯೂರಪ್ಪ ಸಂತೈಸಿದರು.