ದಾರಿಯುದ್ಧಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ: ಸಿ.ಟಿ ರವಿ ವ್ಯಂಗ್ಯ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ನವರು ಮೊದಲು ಕೋಲಾರಕ್ಕೆ ಎತ್ತಿನಹೊಳೆ ನೀರು ತರುತ್ತೇವೆ ಎಂದಿದ್ದರು. ಈಗ ಎತ್ತು ಒಂದು ಕಡೆ ಹೊಳೆ ಒಂದು ಕಡೆಯಾಗಿದೆ. ಈಗ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ.
ದಾರಿಯುದ್ದಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರೀತಿ ಜೀವನದುದ್ದಕ್ಕೂ ಪಾದಯಾತ್ರೆ ಮಾಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಯೋಜನೆಗೆ ಅಡ್ಡ ಹಾಕಿದ್ದು ಯಾರು? ಸ್ಟಾಲಿನ್ ತಾನೇ? ಸ್ಟಾಲಿನ್ ತಮಿಳುನಾಡು ಸಿಎಂ ಆಗಿದ್ದು ಯಾರ ಬೆಂಬಲದಿಂದ? ಸಿಎಂ ನಮ್ಮವರಾಗಿದ್ದರೆ ಕಿವಿ ಹಿಂಡಿ ನೀರು ಬಿಡಿಸ್ತಾ ಇದ್ದೆವು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಟಿ ರವಿ, ಸಿದ್ದರಾಮಯ್ಯ ಅವರು ಈ ಹಿಂದೆ ಅಪ್ಪನಾಣೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಲ್ಲ ಎಂದಿದ್ದರು. ಈಗ ನಾನು ಹೇಳ್ತೇನೆ, ಸಿದ್ದರಾಮಯ್ಯ ಅವರೇ ಅಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗಲ್ಲ. ಕಾಂಗ್ರೆಸ್ ಪಕ್ಷದವರು ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು. ಬೆಂಕಿ ಹಾಕಿದವರನ್ನು ನಮ್ಮ ಬ್ರದರ್ಸ್ ಎಂದು ಕರೆದವರು ಕಾಂಗ್ರೆಸ್ನವರು ಎಂದು ಕಿಡಿಕಾರಿದರು.