ಪದ್ಮಭೂಷಣ ಡಾ. ಬಿ.ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ | ಜನತಾ ನ್ಯೂಸ್
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಲಾಗುವ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ಹಿರಿಯ ಸಾಹಿತಿ ನುಗ್ಗೇಹಳ್ಳಿ ಪಂಕಜ ಅವರಿಗೆ ಇಂದು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿದ ನಂತರ ಅವರು ಮಾತನಾಡಿ, ಇಂದಿನ ಯುವ ಬರಹಗಾರರಿಗೆ ಸಾಹಿತ್ಯ ಆತುರ ಜಾಸ್ತಿ ಇದೆ. ಕೃತಿಯ ಸಂಖ್ಯೆಯನ್ನು ಹೆಚ್ಚಿಸುವ ತವಕದಲ್ಲಿ ಮೌಲ್ಯಯುತ ಕೃತಿ ರಚನೆಯತ್ತ ಲಕ್ಷ್ಯ ವಹಿಸುತ್ತಿಲ್ಲವೆಂದು, ಅಭಿಪ್ರಾಯಪಟ್ಟರು.
ಮುಂದುವರೆದು ಮಾತನಾಡಿದ ಅವರು ನನ್ನ ಬರವಣಿಗೆಗೆ ಅದೆಷ್ಟೊ ಪ್ರಶಸ್ತಿಗಳು ಬಂದಿವೆಯಾದರೂ 106 ವರ್ಷಗಳ ಇತಿಹಾಸವಿರುವ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಡೆಯುತ್ತಿರುವ ಈ ಪ್ರಶಸ್ತಿಯು ನನ್ನ ಸಾಹಿತ್ಯ ಸಾಧನೆಗೆ ಸಂದ ಮಹತ್ವದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ಪುರಸ್ಕೃತರ ಮನೆಗೆ ತೆರಳಿ ನಾಡೋಜ ಡಾ. ಮಹೇಶ ಜೋಶಿ ಅವರು ಈ ೨೦೨೨ ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು ನಿಮ್ಮಂತಹ ಹಿರಿಯ ಸಾಹಿತ್ಯ ಸಾಧಕರು ನಮ್ಮೊಂದಿಗಿರುವುದು ನಮ್ಮ ಹೆಮ್ಮೆಯಾಗಿದೆ. ಪರಿಷತ್ತಿಗೆ ನಿಮ್ಮಂತವರ ಮಾರ್ಗದರ್ಶನ ಸದಾ ಇರಬೇಕೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ಪಾಂಡು ಹಾಗೂ ಕ.ಸಾ.ಪ.ದ ಮಾಧ್ಯಮ ಸಲಹೆಗಾರರಾದ ಶ್ರೀನಾಥ ಜೋಶಿ ಅವರುಗಳು ಉಪಸ್ಥಿತರಿದ್ದರು.