ರಾಕ್ ಗಾರ್ಡನ್(ಶಿಲ್ಪವನ) ಗೆ ದಿನವು ಬರುತ್ತಿರುವ ಸಾವಿರಾರು ಜನ: ಹೆಚ್ಚಿದ ಆದಾಯ | Janata.news
ಕಾರವಾರ : ದಿನೇದಿನೇ ಇಲ್ಲಿನ ಕಡಲತೀರದಲ್ಲಿ ನಿರ್ಮಿಸಲಾಗಿರುವ ರಾಕ್ ಗಾರ್ಡನ್(ಶಿಲ್ಪವನ) ಪ್ರವಾಸಿಗರ ಆಕರ್ಷಣೆಯ ಪ್ರಮುಖ ತಾಣವಾಗುತ್ತಿದೆ. ಮೊನ್ನೆ ಒಂದೇ ದಿನಕ್ಕೆ ಈ ಗಾರ್ಡನ್ಗೆ ಸುಮಾರು 1300 ಪ್ರವಾಸಿಗರು ಭೇಟಿ ನೀಡಿದ್ದು ವಿಶೇಷವಾಗಿತ್ತು. ಪ್ರತಿ ದಿನ ಸರಾಸರಿ 800 ರಿಂದ 1000 ಜನ ಪ್ರವಾಸಿಗರು ರಾಕ್ ಗಾರ್ಡನ್ಗೆ ಭೇಟಿ ನೀಡುತ್ತಿದ್ದಾರೆ. ರಜಾದಿನಗಳಲ್ಲಿ ರಾಕ್ ಗಾರ್ಡನ್ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ.
ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಇನ್ನು ಸಂಪೂರ್ಣವಾಗಿ ಮುಗಿದಿಲ್ಲ. ಅನೇಕ ಕಾಮಗಾರಿಗಳು ಕೊನೆಯ ಹಂತದಲ್ಲಿವೆ. ಕೆಲ ಮೂರ್ತಿಗಳ ನಿರ್ಮಾಣ ಕಾರ್ಯ ಸಹ ವೇಗವಾಗಿ ನಡೆದಿದೆ. ಪ್ರವೇಶ ದ್ವಾರದಲ್ಲಿ ಕಲಾತ್ಮಕ ಕೆಲಸಗಳು, ಒಳಭಾಗದಲ್ಲಿ ನೆಲಕ್ಕೆ ಕಲ್ಲಿನ ಹಾಸು ಹೊಂದಿಸುವ ಕಾರ್ಯ, ಕೃತಕ ಜಲಪಾತ ನಿರ್ಮಾಣದ ಕಾರ್ಯ ಸಾಗಿವೆ. ಪ್ರವಾಸಿಗರ ವಿಶ್ರಾಂತಿ ಗೃಹ, ರಾಕ್ ಗಾರ್ಡನ್ ಕಚೇರಿ ನಿರ್ಮಾಣ, ವಯೋವೃದ್ಧರು ಹಾಗೂ ಮಕ್ಕಳಿಗಾಗಿ ಶೌಚಾಲಯ ನಿರ್ಮಾಣ ಕಾರ್ಯ ಸಹ ನಡೆದಿವೆ. ಆದರೂ ಪ್ರವಾಸಿಗರ ಆಗಮನ ಮತ್ತು ವೀಕ್ಷಣೆಗೆ ಯಾವುದೇ ಅಡ್ಡಿಯಾಗದಂತೆ ಕಾಮಗಾರಿ ಮಾಡಲಾಗುತ್ತಿದೆ.
ರಾಕ್ ಗಾರ್ಡನ್ ಪ್ರವೇಶಕ್ಕೆ ವಯಸ್ಕರಿಗೆ 35 ರೂ., ಮಕ್ಕಳಿಗೆ 25 ರೂ.ಶುಲ್ಕ ನಿಗದಿ ಮಾಡಲಾಗಿದೆ. ಪ್ರವಾಸಕ್ಕೆ ಬಂದ ಶಾಲಾ ಮಕ್ಕಳ ಪ್ರವೇಶಕ್ಕೆ ಕೊಂಚ ದರ ರಿಯಾಯಿತಿ ಸಹ ಇದೆ. ಪ್ರತಿ ದಿನ 500 ರಿಂದ 900 ಜನ ಪ್ರವಾಸಿಗರು, ಸ್ಥಳೀಯರು ರಾಕ್ ಗಾರ್ಡನ್ಗೆ ಭೇಟಿ ನೀಡುತ್ತಿದ್ದಾರೆ. ಪ್ರತಿದಿನ 6000 ದಿಂದ 9 ಸಾವಿರ ರೂ. ತನಕ ಆರಂಭದ ದಿನಗಳಲ್ಲಿ ಹಣ ಸಂಗ್ರಹ ಆರಂಭದ ದಿನಗಳಲ್ಲಿ ಇತ್ತು. ನಂತರ ಇದು ನಿಧಾನಕ್ಕೆ ರಜಾ ದಿನಗಳಲ್ಲಿ 13 ಸಾವಿರತನಕ ಏರಿಕೆಯಾಯಿತು. ಮಾ.25 ರಂದು 1300 ಜನ ಮಕ್ಕಳು ಸೇರಿದಂತೆ ,ಪ್ರವಾಸಿಗರು ರಾಕ್ ಗಾರ್ಡನ್ಗೆ ಭೇಟಿ ನೀಡಿ ಒಂದೇ ದಿನ 43000 ರೂ. ಸಂಗ್ರಹ ವಾಗುವ ಮೂಲಕ ರಾಕ್ ಗಾರ್ಡನ್ ದಾಖಲೆ ಬರೆದಿದೆ.
3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಕ್ ಗಾರ್ಡನ್ ಇದೀಗ ನಿಧಾನಕ್ಕೆ ಆದಾಯ ತರತೊಡಗಿದೆ. ಆದಾಯದ ಅರ್ಧ ಲಾಭ ರವೀಂದ್ರನಾಥ ಕಡಲತೀರ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಗೆ ಬರಲಿದ್ದು, ಬಂದ ಲಾಭವನ್ನು ರಾಕ್ ಗಾರ್ಡನ್ ನಿರ್ವಹಣೆಗೆ ಬಳಸಲಾಗುತ್ತಿದೆ. ರಾಕ್ ಗಾರ್ಡನ್ ಒಳಗೆ ಜಲಪಾತ ಮತ್ತು ಹಸಿರು ಬೆಳೆಸುವ ಕ್ರಿಯೆ ಜಾರಿಯಲ್ಲಿದೆ. ಜೊತೆ ಸಿಬ್ಬಂದಿಯ ವೇತನ ಸಹ ಅಲ್ಲಿನ ಲಾಭಾಂಶದಿಂದಲೇ ನಿರ್ವಹಿಸಲಾಗುತ್ತಿದೆ.
ಆಕ್ಷೇಪಕ್ಕೆ ಕಾರಣವಾದ ದುಬಾರಿ ಪ್ರವೇಶ ದರ
ರಾಕ್ ಗಾರ್ಡನ್ ಪ್ರವೇಶ ದರ ಒಬ್ಬರಿಗೆ ರೂ.35 ಹೆಚ್ಚಾಯಿತು. ಮಕ್ಕಳಿಗೆ ರೂ.25 ಸಹ ಹೆಚ್ಚಾಗಿದೆ. ದರವನ್ನು ವಯಸ್ಕರಿಗೆ ರೂ.20 ಹಾಗೂ ಮಕ್ಕಳಿಗೆ ರೂ.10 ರಂತೆ ನಿಗದಿ ಮಾಡಲಿ. ಕುಟುಂಬ ಸಮೇತ ಬರುವವರಿಗೆ ರೂ.50 (ಕನಿಷ್ಠ 5 ಜನ ಮಕ್ಕಳು ಸೇರಿ) ನಿಗದಿ ಮಾಡಿದರೆ ರಾಕ್ ಗಾರ್ಡನ್ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚುತ್ತದೆ. ರಾಕ್ ಗಾರ್ಡನ್ ಪ್ರವೇಶ ದ್ವಾರ ನಗರದಿಂದ ದೂರವಿದೆ. ಅಲ್ಲಿಗೆ ಆಟೋದಲ್ಲಿ ಬರಬೇಕಾದ ಸನ್ನಿವೇಶವಿದೆ. ಪ್ರವೇಶವನ್ನು ಆಂಜನೇಯನ ವಿಗ್ರಹವಿರುವ ಕಡಲತೀರದ ಸಮೀಪದ ಭಾಗದಿಂದಲೂ ಪ್ರಾರಂಭಿಸಬೇಕು. ಎರಡೂ ಕಡೆ ಪ್ರವೇಶ ದ್ವಾರ ಇದ್ದರೆ ಪ್ರವಾಸಿಗರಿಗೆ ಅನುಕೂಲವೂ ಆಗಲಿದೆ. ಅಲ್ಲದೇ ರಾಕ್ಗಾರ್ಡನ್ ಬರುವವರ ಸಂಖ್ಯೆ ಇಮ್ಮಡಿಸಲಿದೆ ಎಂಬುದು ಸಾರ್ವಜನಿಕರ ಬೇಡಿಕೆ. ಕಾರವಾರಿಗರು ಅಮೂಲ್ಯ ಬೀಚ್ನ್ನು ರಾಕ್ ಗಾರ್ಡನ್ಗೆ ಬಿಟ್ಟುಕೊಟ್ಟಿದ್ದು ಪ್ರವೇಶ ಶುಲ್ಕವನ್ನು ನಗರದ ಜನತೆಗೆ ವಿಧಿಸಬಾರದು. ರಾಕ್ ಗಾರ್ಡನ್ ಪಕ್ಕವೇ ತಲೆ ಎತ್ತುತ್ತಿರುವ ಯಾವುದೇ ಮನೋರಂಜನಾ ತಾಣಗಳ ಪ್ರವೇಶಕ್ಕೆ ಶುಲ್ಕ ವಿಧಿಸಬಾರದು ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.
ಕಿರು ಚಿತ್ರ ಶೂಟಿಂಗ್
ರಾಕ್ ಗಾರ್ಡನ್ನಲ್ಲಿ ಕಲಾತ್ಮಕ ಕಿರುಚಿತ್ರದ ಚಿತ್ರೀಕರಣ ಸಹ ನಡೆದಿದೆ. ದಯಾಮರಣ ಕುರಿತ ನಿರ್ಗಮನ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಕ ಮಂಜುನಾಥ ಹೊಳೆಸಿರಿಗೆರೆ ಅವರ ತಂಡ ಚಿತ್ರೀಕರಿಸಿದೆ. ಸಮುದ್ರದ ಅಗಾಧತೆ ಜೀವನವನ್ನು ಪ್ರತಿನಿಧಿಸುತ್ತಿದ್ದು, ಅದು ರಾಕ್ ಗಾರ್ಡನ್ ಪಕ್ಕವೇ ಇರುವ ಕಾರಣ ಸೂರ್ಯಸ್ತದ ದೃಶ್ಯ ನಿರ್ಗಮನ ಚಿತ್ರಕ್ಕೆ ಪೂರಕವಾಗಿತ್ತು. ಹಾಗಾಗಿ ರಾಕ್ ಗಾರ್ಡನ್ ಸ್ಥಳವನ್ನು ಆಯ್ಕೆ ಮಾಡಿಕೊಂಡದ್ದಾಗಿ ನಿರ್ದೇಶಕರು ಹೇಳಿದರು. ದಾವಣಗೆರೆಯ ಆನಂದ ಆಶ್ರಯ ಧರ್ಮ ವೃದ್ಧಾಶ್ರಮದ ನಿವಾಸಿ ಕರಿಬಸಮ್ಮ 78 ವರ್ಷದ ವೃದ್ಧೆ. ಅವರು 12 ವರ್ಷದಿಂದ ಬೆನ್ನುಹುರಿ ನೋವು, ಮಧುಮೇಹದಿಂದ ಬಳಲುತ್ತಿದ್ದಾರೆ. ಅವರು ದಯಾಮರಣಕ್ಕೆ ಅರ್ಜಿ ಹಾಕಿಕೊಂಡಿದ್ದು, ಅವರ ಕುರಿತ ಕಲಾತ್ಮಕ ಚಿತ್ರ ಇದೀಗ ರಾಕ್ ಗಾರ್ಡನ್ನಲ್ಲಿ ಸ್ವಲ್ಪಭಾಗ ಚಿತ್ರೀಕರಣವಾಗಿದೆ. ಪವಿತ್ರಾ ಜಯರಾಂ ಕರಿಬಸಮ್ಮ ಅವರ ಪಾತ್ರದಲ್ಲಿ ನಟಿಸಿದ್ದಾರೆ.
ಗಾರ್ಡನ್ನಲ್ಲಿ ಪ್ರತಿ ರವಿವಾರ ಸಾಂಸ್ಕøತಿಕ ಕಾರ್ಯಕ್ರಮ: ಜಿಲ್ಲೆಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಕ್ ಗಾರ್ಡನನಲ್ಲಿ ಪ್ರತಿ ರವಿವಾರ ಸಂಜೆ 5 ರಿಂದ 7 ಗಂಟೆಯತನಕ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಲಾವಿದರ ತಂಡಕ್ಕೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುತ್ತಿದೆ. ಈಗಾಗಲೇ ಯಲ್ಲಾಪುರದ ಸಿದ್ಧಿಗಳ ನೃತ್ಯದ ತಂಡ, ಅಂಕೋಲಾದ ಹಾಲಕ್ಕಿಗಳ ತಂಡ, ಕಾರವಾರದ ಗುಮಟೆ ಪಾಂಗ್ ಕಲಾವಿದರು, ಹೊನ್ನಾವರದ ಸುಗ್ಗಿ ಕುಣಿತದ ಕಲಾವಿದರು ರಾಕ್ ಗಾರ್ಡನ್ನಲ್ಲಿನ ಆಯಾ ಬುಡಕಟ್ಟು ಜನರ ಗುಡಿಸಲುಗಳ ಅಂಗಳದಲ್ಲೇ ಹಾಡು ಸಹಿತ ನೃತ್ಯ ಪ್ರದರ್ಶನ ನೀಡಿದ್ದಾರೆ.
ರಾಕ್ ಗಾರ್ಡನ್ ಬೇಟಿ ನೀಡಿದ ಪ್ರವಾಸಿಗಳಲ್ಲಿ ಬೆಂಗಳೂರಿನ ಎನ್. ಅರುಂಧತಿ ತಮ್ಮ ಅನುಭವ ಹಂಚಿಕೊಂಡು, ಪ್ರವೇಶ ದರ ಕೊಂಚ ಹೆಚ್ಚಾಗಿದೆ. ಇಲ್ಲಿ ಅನೇಕ ಮೂಲಭೂತ ಸೌಕರ್ಯಗಳು ಕಲ್ಪಿಸಿ ಲೈಟಿಂಗ್ ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ. ಜೊತೆಗೆ ಮಹಿಳಾ ಸುರಕ್ಷತಾ ಸಿಬ್ಬಂದಿಗಳ ಸಂಖ್ಯೆಯನ್ನು ಸಹ ಹೆಚ್ಚಿಸಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕಿದೆ, ಎಂದರು.