ನಾವು ಭಗವದ್ಗೀತೆ, ಕುರಾನ್, ಬೈಬಲ್ ಯಾವುದಕ್ಕೂ ವಿರೋಧ ಮಾಡಲ್ಲ | JANATA NEWS
ಮಂಗಳೂರು : ನಾವು ಭಗವದ್ಗೀತೆ, ಕುರಾನ್, ಬೈಬಲ್ ಯಾವುದಕ್ಕೂ ವಿರೋಧ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುವವರು, ಸಾಫ್ಟ್ ಹಿಂದುತ್ವನೂ ಇಲ್ಲ, ಹಾರ್ಡ್ ಹಿಂದುತ್ವನೂ ಇಲ್ಲ, ನಾವು ಎಲ್ಲಾ ಧರ್ಮಗಳನ್ನು ಸಮನಾಗಿ ಕಾಣುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಸಂವಿಧಾನ ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದುದ್ದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಬೇಕು. ಭಗವದ್ಗೀತೆ ಹೇಳಿಕೊಟ್ಟರೆ ತಪ್ಪೇನಿಲ್ಲ ಎಂದು ಹೇಳಿದರು.
ಹಿಜಾಬ್ ತೀರ್ಪಿನ ಬಗ್ಗೆ ಅಸಮಧಾನ ಇರುವವರು ಬಂದ್ ಮಾಡಿದ್ದಾರೆ, ಆದರೆ ನ್ಯಾಯಾಂಗದ ನಿರ್ಣಯವನ್ನು ಯಾರೂ ಕೂಡ ವಿರೋಧ ಮಾಡಬಾರದು ಎಂದರು.
ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಅಭಿಯಾನದ ಕುರಿತು ಪ್ರತಿಕ್ರಿಸಿದ ಅವರು ಯಾವುದೇ ಧರ್ಮವಾಗಿರಲಿ ಅವರು ಕೋಮುವಾದ ಮಾಡಕೂಡದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿಗೆ ವಿರುದ್ಧವಾದ ನಡವಳಿಕೆ ಸರಿಯಲ್ಲ. ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದರು.