ಇನ್ನೂ ಮೂರು ದಿನಗಳವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆ ಮುನ್ಸೂಚನೆ : ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಆದೇಶ | JANATA NEWS
ಬೆಂಗಳೂರು : ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡಿವೆ. ಪರಿಸ್ಥಿತಿಯನ್ನು ಮತ್ತು ಭರವಸೆ ಹದಗೆಡಿಸುವಂತೆ, ಇನ್ನೂ ಮೂರು ದಿನಗಳವರೆಗೆ ಬೆಂಗಳೂರಿಗೆ "ಭಾರೀ ಮಳೆ" ಮುನ್ಸೂಚನೆಯನ್ನು ಹವಾಮಾನ ಇಲಾಖೆಯಿಂದ ದೊರತಿದೆ.
ಅರ್ಧ ಗಂಟೆಯಿಂದ ಒಂದು ಗಂಟೆಯ ಅವಧಿಯಲ್ಲಿ 73 ಮಿ.ಮೀ ವರೆಗಿನ ಅತಿ ಹೆಚ್ಚು ಮತ್ತು ಬಿರುಸಿನ ಮಳೆಯೇ ನೀರು ನಿಲ್ಲಲು ಕಾರಣ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ.
ನಗರದ ಹಲವೆಡೆ ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ಜಲಾವೃತಗೊಂಡಿದ್ದರಿಂದ ಜನರು ಪರದಾಡುವಂತಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಅಗ್ನಿಶಾಮಕ ಇಲಾಖೆಯಿಂದ ಕೆಲವು ಪ್ರದೇಶಗಳಲ್ಲಿ ತುರ್ತು ಕಾರ್ಯಾಚರಣೆ ನಡೆಸಲಾಯಿತು.
ಗುರುವಾರ ಬಸ್ಸುಗಳು, ಕಾರುಗಳು ಮತ್ತು ಇತರ ವಾಹನಗಳು ರಭಸದಿಂದ ಹರಿಯುವ ನೀರಿನಲ್ಲಿ ಹೆಣಗಾಡುತ್ತಿರುವ ದೃಶ್ಯ ಕಂಡುಬಂತು. ಮಳೆಯಿಂದಾಗಿ ನಗರದ ಕೆಲವೆಡೆ ಮನೆಗಳು ಸೊಂಟದವರೆಗೂ ನೀರಿನಲ್ಲಿ ಮುಳುಗಿವೆ.
ಆದೇಶ ಅನುಸರಿಸಲು ವಿಫಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು, ಎಂದು ಗೌರವ್ ಗುಪ್ತಾ ಅಧಿಕಾರಿಗಳಿಗೆ ತಿಳಿಸಿದರು. ಹವಾಮಾನ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ಅದನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ, ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತುರ್ತು ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಯ ಸಮಯದಲ್ಲಿ ಯಾವುದೇ ನಾಗರಿಕರು ಸಮಸ್ಯೆಗಳನ್ನು ಎದುರಿಸಬಾರದು ಎಂದು ಹೇಳಿದ್ದಾರೆ.