ಬಿಬಿಎಂಪಿ ಮುಖ್ಯ ಆಯುಕ್ತರಿಂದ ಮಳೆ ಪೀಡಿದ ಪ್ರದೇಶ ಹಾಗೂ ದೊರೆಕೆರೆಯ ಬಳಿಯ ರಾಜಕಾಲುವೆ ಪರಿಶೀಲನೆ | JANATA NEWS
ಬೆಂಗಳೂರು : ಬೆಂಗಳೂರು ದಕ್ಷಿಣ ಕ್ಷೇತ್ರದ ಉತ್ತರಹಳ್ಳಿ ಮತ್ತು ದೊರೆಕೆರೆಯಲ್ಲಿ ಮಳೆ ಪೀಡಿತ ಪ್ರದೇಶಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರಹಳ್ಳಿ ಹೇಮಾವತಿ ರಸ್ತೆ, ಲಕ್ಷಯ್ಯ ಲೇಔಟ್ ಗೆ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಸುಮಾರು 150 ಮನೆಗಳಿಗೆ ನೀರು ನುಗ್ಗಿತ್ತು. ಈ ಸಂಬಂಧ ರಾಜಕಾಲುವೆಯನ್ನು ಪರಿಶೀಲನೆ ನಡೆಸಿ ಕೂಡಲೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳನ್ನು ತೆರವುಗೊಳಿಸಬೇಕು. ಜೊತೆಗೆ ರಾಜಲಾವೆಯ ಕಲ್ವರ್ಟ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದ ವೇಳೆ ರಾಜಕಾಲುವೆ ಮೂಲಕ ಹರಿದು ಹೋಗುವ ನೀರು ದೊರೆಕೆರೆಗೆ ಸರಾಗವಾಗಿ ಸೇರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ್ಯಾವ ಮನೆಗೆ ನೀರು ನುಗ್ಗಿದೆ ಎಂಬುದನ್ನು ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಶ್ರೀ ರಾಮಕೃಷ್ಣ, ವಲಯ ಮುಖ್ಯ ಇಂಜಿನಿಯರ್ ಆದ ಶಶಿಕುಮಾರ್, ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಸುಗುಣಾ, ಕೆರೆಗಳ ವಿಭಾಗದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.