ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವಂತೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಒತ್ತಾಯ | JANATA NEWS
ಬೆಂಗಳೂರು : ರಾಜ್ಯದಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದೆ. ಈ ನೆಲದಲ್ಲೇ ಇದ್ದು, ಈ ನೆಲದ ವಿರುದ್ಧವೇ ಬಾಲ ಬಿಚ್ಚುತ್ತಿದ್ದಾರೆ. ಸರ್ಕಾರ ಈ ಕೂಡಲೇ ಎಂಇಎಸ್ ನಿಷೇಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮೂಲಕ ಹೇಳಿಕೆ ನೀಡಿರುವ ಅವರು “ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್) ನಿಷೇಧಿಸಿ ಎಂದು ಇಡೀ ಕರ್ನಾಟಕವೇ ಒಕ್ಕೊರಲಿನಿಂದ ಆಗ್ರಹ ಮಾಡಿತ್ತು. ಬಿಜೆಪಿ ಸರಕಾರ ಅಸಡ್ಡೆ ತೋರಿದ ಪರಿಣಾಮ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಭಾಷೆ-ಭಾಷೆಗಳ ಜನರ ನಡುವೆ ಬೆಂಕಿ ಹಚ್ಚುವ ಇವರು ಭಯೋತ್ಪಾದಕರು” ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ದಿನದ ನೆಪದಲ್ಲಿ ಎಂಇಎಸ್ ಪುಂಡರು ನಾಡದ್ರೋಹ ಎಸಗಿದ್ದಾರೆ. ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯ ಎಸಗಿರುವ ಶುಭಂ ಶೆಳಕೆ ಎಂಬ ಧೂರ್ತನು ಫೇಸ್ಬುಕ್ನಲ್ಲಿ ರಾಜ್ಯವನ್ನು ಒಡೆಯುವ ಸಂದೇಶ ಪೋಸ್ಟ್ ಮಾಡಿದ್ದಾನೆ. ವಿಡಿಯೋ ಮೂಲಕ ಕನ್ನಡಿಗರನ್ನು ಕೆಣಕಿದ್ದಾನೆ.
ಕರ್ನಾಟಕದ ಭೂಪಟವನ್ನು ತಿರುಚಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ನಾಡದ್ರೋಹಿ ಗ್ರಾಫಿಕ್ ಮಾಡಿ ಅದನ್ನು ಪೋಸ್ಟ್ ಮಾಡಿರುವ ಶೆಳಕೆಗೆ ಚಳಿ ಬಿಡಿಸಬೇಕಿದೆ ಎಂದು ಕಿಡಿಕಾರಿದ್ದಾರೆ
ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ" ಎಂದು ಉದ್ರೇಕಕಾರಿ ಬರಹ ಬರೆದ ಅವನ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು. ಬೆಳಗಾವಿ ಗಲಾಟೆಯಲ್ಲಿ ಜೈಲು ಸೇರಿದ್ದ ಶುಭಂ ಶೆಳಕೆ, ಈಗ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರ ಸರಕಾರ ಇದೆಯಾ? ಅಥವಾ ಮಹಾರಾಷ್ಟ್ರದ ಬಾಲಂಗೋಚಿ ಆಡಳಿತ ಉಂಟಾ? ತಲೆಯ ಮೇಲೆ ಕೇಸರಿ ಪೇಟ, ಭುಜದ ಮೇಲೆ ಕೇಸರಿಶಾಲು ಧರಿಸಿ ಪೋಸು ಕೊಡುವ ಎಂಇಎಸ್ ಪುಂಡರ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಸರಕಾರದ ಮನಸ್ಸು ಒಪ್ಪುತ್ತಿಲ್ಲವಾ? ಸ್ಪಷ್ಟಪಡಿಸಲಿ.
ಬಿಜೆಪಿ ಸರಕಾರಕ್ಕೆ ಇರುವುದು ಒಂದೇ ಆಯ್ಕೆ. ಎಂಇಎಸ್ ಅನ್ನು ಕೂಡಲೇ ನಿಷೇಧಿಸಬೇಕು ಹಾಗೂ ಕಿಡಿಗೇಡಿ ಶೆಳಖೆಯನ್ನು ಬಂಧಿಸಿ ರಾಜ್ಯದಿಂದ ಹೊರಹಾಕಬೇಕು. ಇಲ್ಲವಾದರೆ ʼಬಿಜೆಪಿಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಬಾಲʼ ಎನ್ನದೇ ವಿಧಿ ಇಲ್ಲ. ʼರಾಜ್ಯವಿರೋಧಿ ರಾಷ್ಟ್ರೀಯವಾದʼವನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.