ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ? | JANATA NEWS
ಬೆಂಗಳೂರು : ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಈ ಪ್ರಕರಣದ ವಿಚಾರವಾಗಿ ನನ್ನ ವಿರುದ್ಧ ದಾಖಲೆ ಇದ್ದರೆ ಶಿವಕುಮಾರ್ ಅವರು ಪ್ರಕಟಿಸಲಿ ಎಂದು ಸಚಿವ ಅಶ್ವಥ್ ನಾರಾಯಣ್ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರೋದು ಆ ಮಂತ್ರಿಯ ತಮ್ಮ ಎಂದು ನಾನು ಹೇಳಲ್ಲ. ನಮಗಿರುವ ಮಾಹಿತಿ ಪ್ರಕಾರ ಮಾಗಡಿಯ ಅಭ್ಯರ್ಥಿಗಳು ಅವರು. ಈ ವಿಚಾರ ತನಿಖೆಗೆ ಬಂದಾಗ ಮಂತ್ರಿಗಳೇ ಫೋನ್ ಮಾಡಿ ನಿಲ್ಲಿಸಿದ್ದಾರೆ ಎನ್ನಲಾಗಿದೆ. ತನಿಖೆ ಪೂರ್ತಿ ಆಗದೇ ಪರೀಕ್ಷೆಯನ್ನ ನಿಲ್ಲಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಡಿಜಿ ಹಾಗೂ ಗೃಹ ಸಚಿವರು ಬೇರೆ ಬೇರೆ ಮಾಹಿತಿಯನ್ನ ನೀಡಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ ಕೆಲವರ ಹೆಸರು ತನಿಖೆ ವೇಳೆ ಗೊತ್ತಾಗಿದೆ. ಆದರೆ ಸಿಐಡಿ ಅಧಿಕಾರಿಗಳು ಯಾರ ಮನೆಗೆ ಹೋಗಿದ್ರು? ಅವರ ತನಿಖೆ ಮಾಡಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಪಾಪ ಉಸ್ತುವಾರಿ ಸಚಿವರು ಗಂಡಸು ಯಾರಿದ್ದಾರೆ ಎಂದು ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರಲ್ಲಿ ಗಂಡಸರಿಲ್ಲ, ನಾವೆಲ್ಲಾ ಹೆಂಗಸರು. ನಾನು, ನನ್ನ ತಮ್ಮ, ಅನಿತಾ ಕುಮಾರಸ್ವಾಮಿ ಎಲ್ಲರೂ ಅವರ ಗಂಡಸ್ತನ ನೋಡಿ ಗಢ ಗಢ ನಡಗುತ್ತಿದ್ದೇವೆ.
ಮುಖ್ಯಮಂತ್ರಿಗಳ ಮುಂದಯೇ ಗಂಡಸು ಯಾರು ಅಂತ ಕೇಳಿದ್ದರು. ಸಚಿವರೊಬ್ಬರ ಹೆಸರು ಪಿಎಸ್ಐ ಅಕ್ರಮದಲ್ಲಿ ಕೇಳಿ ಬಂದಿದೆ. ಅವರ ತಮ್ಮ ಎಂದು ಹೇಳಲ್ಲ, ಅವರ ಕುಟುಂಬಸ್ಥರು, ಸಂಬಂಧಿಕರು ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಸಿಎಂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಪ್ರತಿನಿತ್ಯ ಬಂಡವಾಳ ಬಿಚ್ಚಿಡುತ್ತೇನೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲು ಅವರು ವಿವಿಧ ನೇಮಕಾತಿ ಅಕ್ರಮದಲ್ಲಿ ಯುವಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲಿ, ನಂತರ ಉಳಿದ ವಿಚಾರ ಮಾತನಾಡೋಣ ಎಂದರು.