₹2.35 ಕೋಟಿ ಲೂಟಿಗೆ ಭೋವಿ ಅಭಿವೃದ್ಧಿ ನಿಗಮದಲ್ಲಿ ಯತ್ನ ಆರೋಪ | JANATA NEWS
ಬೆಂಗಳೂರು : ನಕಲಿ ಸಹಿ ಮಾಡಿ ಸರ್ಕಾರಿ ಹಣ ಮಂಜೂರಾತಿಗೆ ಯತ್ನಿಸಿ ಕೆಎಎಸ್ ಅಧಿಕಾರಿಗಳಿಗೆ ಬೆದರಿಸಿದ್ದ ಆರೋಪದಡಿ ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಭೋವಿ ಅಭಿವೃದ್ಧಿ ನಿಗಮದ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ಸಹಿಯನ್ನ ನಕಲು ಮಾಡಿ 2.35 ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿರುವ ಆರೋಪ ರವಿಕುಮಾರ್ ಮೇಲೆ ಇದೆ. ಹೀಗಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಐಪಿಸಿ 420 ಅಡಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ಡಾ. ಬಿ.ಕೆ ನಾಗರಾಜಪ್ಪ ದೂರು ದಾಖಲಿಸಿದ್ದಾರೆ. ದಾಖಲಾಗುತ್ತಿದ್ದಂತೆ ರವಿಕುಮಾರ್ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸರ್ಕಾರದ ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಭೋವಿ ನಿಗಮಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪೈಕಿ ನಕಲಿ ಜಾತಿ ಪತ್ರ ಹಾಗೂ ಅಂಕಪಟ್ಟಿ ಸಲ್ಲಿಸಿದ್ದ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು. ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅರ್ಜಿಗಳ ಪೈಕಿ 60 ಮಂದಿ ಫಲಾಪೇಕ್ಷಿಗಳ ಅರ್ಜಿಗಳಿಗೆ ವ್ಯವಸ್ಥಾಪಕಿ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಸಹಿಗಳನ್ನ ಫೋರ್ಜರಿ ಮಾಡಿ ಮಂಜೂರಾತಿಗೆ ಸಲ್ಲಿಸಿದ್ದ ಎನ್ನಲಾಗ್ತಿದೆ.
ಕಳೆದ ಮಾರ್ಚ್ನಲ್ಲಿ ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್ನ ಚೆಕ್ಗಳು ಕಳುವಾಗಿದ್ದವು. ಹೀಗಾಗಿ ಐಸಿಐಸಿಐ ಬ್ಯಾಂಕ್ಗೆ ಭೋವಿ ಅಭಿವೃದ್ಧಿ ನಿಗಮ ದೂರು ನೀಡಿತ್ತು. ಇತ್ತ ಕಳುವಾಗಿದ್ದ ಚೆಕ್ ಬಳಸಿ ರಾಯಚೂರು ಜಿಲ್ಲೆಗೆ 52 ಲಕ್ಷ ರೂಪಾಯಿ ಹಣವನ್ನ ನಿರ್ದೇಶಕ ರವಿಕುಮಾರ್ ಜಮಾ ಮಾಡಿದ್ದರಂತೆ. 52 ಲಕ್ಷ ಅಕ್ರಮವಾಗಿ ಜಮಾ ಮಾಡಿರುವುದಲ್ಲದೇ 60 ಅಕ್ರಮ ಫಲಾಪೇಕ್ಷಿಗಳ ಹೆಸರಲ್ಲಿ ಒಂದು ಕೋಟಿ 83 ಲಕ್ಷ ಹಣ ಮಂಜೂರಾತಿಗೆ ಸಹಿ ಫೊರ್ಜರಿ ಮಾಡಿದ್ದರು.
ಇತ್ತೀಚೆಗೆ ನಡೆದ ಭೋವಿ ಅಭಿವೃದ್ದಿ ನಿಗಮ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರವಿಕುಮಾರ್ ಅಕ್ರಮ ಬೆಳಕಿಗೆ ಬಂದಿತ್ತು. ರವಿಕುಮಾರ್ ಅಕ್ರಮದ ಬಗ್ಗೆ ಪ್ರಶ್ನಿಸಲು ಮುಂದಾದ ಕೆ.ಎ.ಎಸ್ ಅಧಿಕಾರಿಗಳಿಗೆ ರವಿ ಧಮ್ಕಿ ಹಾಕಿದ್ದ ಎನ್ನಲಾಗ್ತಿದೆ.