ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ: ಡಿ.ಕೆ. ಶಿವಕುಮಾರ್ | JANATA NEWS
ಬೆಂಗಳೂರು : ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವ ಮಾನವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಾಧ್ಯಮಗಳ ಜತೆ ಅವರು ಮಾತನಾಡಿ, ಅಶ್ವಥ್ ನಾರಾಯಣ್ ಅವರು, ತಾನು ವಿಶ್ವ ಮಾನವ, ಒಕ್ಕಲಿಗ ಎಂದು ಹೇಳಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಶಿವಕುಮಾರ್ ಅವರು, ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದಿದ್ದರು, ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು.
ಅವರ ನೇಮಕ ಮಾಡಿದ್ದು ಯಾರು? ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ? ಎಂದು ತಿರುಗೇಟು ನೀಡಿದರು.
ಪ್ರಿಯಾಂಕ್ ಖರ್ಗೆಗೆ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಯಾರು ಆರೋಪಿಸ್ತಾರೆ ಅವರಿಗೆ ನೋಟಿಸ್ ಕೊಡ್ತಾರೆ. ಒಳ್ಳೆಯ ಸಂಪ್ರದಾಯ ಶುರು ಮಾಡಿದಕ್ಕೆ ಅಭಿನಂದನೆ. ಅದೇ ರೀತಿ ಯತ್ನಾಳ್ ಅವರಿಗೂ ಕೊಡಬೇಕಲ್ಲ, ಅವರ ಪಕ್ಷದವರಿಗೂ ನೋಟಿಸ್ ಕೊಡಬೇಕು.
ಪ್ರಿಯಾಂಕ್ ನಮ್ಮ ವಕ್ತಾರರು. ಈ ವಿಚಾರ ಮಾತನಾಡಲು ಅಧಿಕಾರ ಕೊಟ್ಟಿದ್ದೇವೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಗೃಹ ಸಚಿವರು ಸದನದಲ್ಲಿ ಏನು ಆಗಿಲ್ಲ ಅಂತಾರೆ. ಆದರೆ ಅರೆಸ್ಟ್ ಮಾಡ್ತಿರೋದು ಯಾಕೆ?. ಯಾರು ಆರೋಪಿ ಎಂಬುದನ್ನ ಗೌಪ್ಯವಾಗಿ ಇಡ್ತಿದ್ದಾರೆ ಎಂದು ಆರೋಪಿಸಿದರು.