ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ... ಅಸಹಾಯಕ ಡಿಕೆಶಿ: ಡಿಕೆಶಿ ಕಾಲೆಳೆದ ಬಿಜೆಪಿ | JANATA NEWS
ಬೆಂಗಳೂರು : ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್ ಸಾದಿಕ್ ಅವರಿರಬಹುದೇ? ಎಂದು ಡಿಕೆಶಿ ಅವರನ್ನು ಅಸಹಾಯಕ ಡಿಕೆಶಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಟ್ವೀಟ್ ಮೂಲಕ ಎಂಬಿ ಪಾಟೀಲ್ ಪರ ರಮ್ಯಾ ಬ್ಯಾಟಿಂಗ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟ್ವೀಟ್ ಮಾಡಿ ಅಪಹಾಸ್ಯ ಮಾಡಿದ್ದಾರೆ. ನೀವೇ ಬೆಳೆಸಿದ ರಮ್ಯಾ ನೇತೃತ್ವದಲ್ಲಿ ಮತ್ತಷ್ಟು ನಕಲಿ ಖಾತೆ ಜನಿಸಲಿದ್ದು, ನಿಮ್ಮದೇ ಮೂಗಿನ ಕೆಳಗೆ ನಿಮ್ಮ ವಿರುದ್ಧವೇ ಟೋಲ್ ಕಿಟ್ ಹಣೆಯಲಾಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್ ಸಾದೀಕ್ ಅವರಿರಬಹುದೇ? ಕೆಪಿಸಿಸಿ ಮನೆಯಲ್ಲಿ ಮೀರ್ ಸಾದೀಕ್ ಹಾವಳಿ ಜಾಸ್ತಿ ಆಗಿದ್ದು ನಿಜವೇ? ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತ್ತಲ್ಲೋ ಎಂಬ ಸ್ಥಿತಿ ಡಿಕೆಶಿದು. ಕಾಂಗ್ರೆಸ್ ಒಂದು ಒಡೆದ ಮನೆ. ಇಲ್ಲಿ ಯಾರ ಅಭಿಪ್ರಾಯವನ್ನು ಯಾರು ಸಮರ್ಥಿಸುತ್ತಾರೆ, ಯಾರು ವಿರೋಧಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ಎಂ.ಬಿ. ಪಾಟೀಲ್ ಹಾಗೂ ಅಶ್ವಥ್ ನಾರಾಯಣ ಅವರ ಭೇಟಿಯ ಬಗ್ಗೆ ಮಾತನಾಡಿದ ಅಸಹಾಯಕ ಡಿಕೆಶಿ ಅವರೀಗ ತಮ್ಮ ಸ್ವಂತ ಮನೆಯಲ್ಲೇ ಉಪವಾಸ ಮಾಡುವ ಸ್ಥಿತಿಯಲ್ಲಿದ್ದಾರೆ. ಹೀಗೇಕಾಯಿತು ಡಿಕೆಶಿವಕುಮಾರ್ ಅವರೇ? ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಉಗ್ರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವಷ್ಟು ಡಿಕೆಶಿವಕುಮಾರ್ ಅಸಹಾಯಕರೇ? ಅಲ್ಪಸಂಖ್ಯಾತ ಸಲೀಂ ಅವರನ್ನು ಕಿತ್ತೊಗೆದು ಉಗ್ರಪ್ಪ ಜೊತೆ ಪತ್ರಿಕಾಗೋಷ್ಠಿ ಮಾಡುವ ಮೂಲಕ ಯಾವ ಸಂದೇಶ ನೀಡುತ್ತಿದ್ದೀರಿ? ನೀವೆಂತಹ ಬಂಡೆ, ಕಲ್ಲುಬಂಡೆಯೋ ಅಥವಾ ಟೊಳ್ಳು ಬಂಡೆಯೋ? ಅಸಹಾಯಕ ಡಿಕೆಶಿ.
ಅಕ್ರಮ ಸಂಪಾದನೆಯ ಹಣದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಏನೋ ಸಾಧನೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಅವರೀಗ ಅಸಹಾಯಕ ಡಿಕೆಶಿ ಆಗಿದ್ದಾರೆ. ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ ಮೀರ್ ಸಾದಿಕ್ ತಂತ್ರವಿದೆಯೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಅಪಹಾಸ್ಯ ಮಾಡಿದ್ದಾರೆ.