ಆಯಸಿಡ್ ಸಂತ್ರಸ್ತರ ಮಾಸಾಶನ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಆಸಿಡ್ ದಾಳಿಗೊಳಗಾದ ಸಂತ್ರಸ್ತರ ಮಾಸಾಶನ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಂದಾಯ ಇಲಾಖೆಯ ಸಾಮಾಜಿಕ ಭದತ್ರೆ ಮತ್ತು ಪಿಂಚಣೆಗಳ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ 'ಹಲೋ ಕಂದಾಯ ಸಚಿವರೇ - 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಿ, ಇಂದು ಮಾತನಾಡಿದ ಅವರು, ಆಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವನ್ನು ಉಂಡಿರುತ್ತಾರೆ.
ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3000ದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜೊತೆಗೆ ಈಗ ಅವರಿಗೆ ಬದುಕು ಸಾಗಿಸಲು ಮನೆ ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೊಮ್ಮಾಯಿ, ಆಡಳಿತ & ರಾಜಕಾರಣ ಎರಡೂ ಕೂಡ ಜನಪರವಾಗಿರಬೇಕು. ರಾಜಕಾರಣದಲ್ಲಿ ಎರಡು ರೀತಿಯ ರಾಜಕಾರಣ ಇದೆ. ಒಂದು ಪೀಪಲ್ ಪಾಲಿಟಿಕ್ಸ್, ಇನ್ನೊಂದು ಪವರ್ ಪಾಲಿಟಿಕ್ಸ್. ಅಧಿಕಾರದಲ್ಲಿದ್ದಾಗ ತಮ್ಮ ಸ್ವಂತದ ಬಗ್ಗೆ ಯೋಚನೆ ಮಾಡಿದವರು. ಅಂಥವರು ದೇಶಕ್ಕೆ ಹಾನಿ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ನಾವು ವಿಧಾನಸಭೆಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೇವೆ. ಆದರೆ ಹಳ್ಳಿಯಲ್ಲಿ ರೈತರು ಸಮಸ್ಯೆಗಳ ಜೊತೆ ಜೀವನ ಮಾಡ್ತಾರೆ. ಸಮಸ್ಯೆಗಳ ಚರ್ಚೆಗೂ & ಜೀವನ ಮಾಡುವುದಕ್ಕೂ ವ್ಯತ್ಯಾಸ ಇದೆ.
ಜನರ ಜೊತೆ ಸಂಪರ್ಕ ಇದ್ದರೆ ಮಾತ್ರ ಜನಪರ ಆಡಳಿತ ಸಾಧ್ಯ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸೌಧದಲ್ಲಿ ಹೆಪ್ಪುಗಟ್ಟಿದಂತೆ ಇದ್ದರೆ ಜನರಿಗೆ ತಲುಪುವುದಿಲ್ಲ. ಅಧಿಕಾರ ಜನರ ಬಳಿ ಜೇನು ತುಪ್ಪದಂತೆ ಹರಿದು ಹೋಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.