ಹನಿಟ್ರ್ಯಾಪ್ಗೆ ಸಿಲುಕಿ, ಬಿಜೆಪಿ ಮುಖಂಡನ ಆತ್ಮಹತ್ಯೆ! | JANATA NEWS
ಬೆಂಗಳೂರು : ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡ ಅನಂತರಾಜು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೇತ್ ನೋಟ್ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಹೇರೋಹಳ್ಳಿ ವಾರ್ಡ್ನ ನಿವಾಸಿ, ಬಿಜೆಪಿ ಮುಖಂಡ ಅನಂತರಾಜು ಮೇ 12ರ ರಾತ್ರಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡೇತ್ ನೋಟ್ನಲ್ಲಿ ಏನಿದೆ?
ಪ್ರಿಯ ಪತ್ನಿ ಸುಮ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ ಅವಳಿಂದ ಪೋಟೋ ವೀಡಿಯೋಗಳ ಟ್ರ್ಯಾಪ್ಗೆ ಸಿಲುಕಿ, ಬ್ಲ್ಯಾಕ್ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯ ಮತ್ತು ಅಭಯ್ನನ್ನು ಚೆನ್ನಾಗಿ ನೋಡಿಕೊ.
ಇಂತಿ ನಿನ್ನ ಮೋಸಗಾರ.
ಕೆ.ಆರ್.ಪುರಂನ ನಿವಾಸಿ ರೇಖಾ ಮತ್ತು ಈಕೆಯ ಪತಿ ವಿನೋದ್ ಹಾಗೂ ಸ್ನೇಹಿತೆ ಸ್ಪಂದನ ಎಂಬುವವರು ಅಶ್ಲೀಲ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು. ಫೇಸ್ಬುಕ್ ಮೂಲಕ ರೇಖಾಳ ಪರಿಚಯ ಅನಂತರಾಜು ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರೇಖಾ ಮತ್ತು ಈಕೆಯ ಗಂಡ ವಿನೋದ್, ಸ್ಪಂದನಾ ಮೂವರು ಸಂಚು ರೂಪಿಸಿ ಅನಂತರಾಜು ಅವರ ಖಾಸಗಿ ಫೋಟೋ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಹಿಂಸಿಸಿದ್ದಾರೆ. ಇವರ ಕಾಟ ಸಹಿಸಲಾಗದೆ ಈ ಹಿಂದೆಯೂ ಆತ್ಮಹತ್ಯೆಗೆ ಅನಂತರಾಜು ಯತ್ನಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ರೇಖಾ, ಪದೆಪದೇ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಈ ಬಗ್ಗೆ ಅನಂತರಾಜು ಅವರ ಪತ್ನಿಗೆ ಗೊತ್ತಾಗಿ, ಹೆದರಬೇಡಿ ಎಂದು ಗಂಡನಿಗೆ ಧೈರ್ಯ ತುಂಬಿದ್ದರು. ಆದರೂ ಆ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡುತ್ತಲೇ ಇತ್ತು. ಇದರಿಂದ ಬೇಸತ್ತ ಅನಂತರಾಜು ನೇಣಿಗೆ ಶರಣಾಗಿದ್ದಾರೆ ಎಂದು ಡೆತ್ನೋಟ್ ಸಮೇತ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅನಂತರಾಜು ಪತ್ನಿ ಸುಮ ದೂರು ದಾಖಲಿಸಿದ್ದಾರೆ.