ಪಠ್ಯ ಪುಸ್ತಕ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ: ಡಿಕೆ ಶಿವಕುಮಾರ್ | JANATA NEWS
ಬೆಂಗಳೂರು : ಪಠ್ಯ ಪುಸ್ತಕ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಸಿಎಂ ಹೇಳಿದ್ದಾರೆ. ನಾಗ್ಪುರ ಎಜುಕೇಷನ್ ಪಾಲಿಸಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಗೌತಮ ಬುದ್ಧ, ಮಹಾವೀರರ ಬಗ್ಗೆ ಏಕವಚನ ಬಳಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಅಂಬೇಡ್ಕರ್ ಅವರ ತಂದೆ, ಹುಟ್ಟಿದ ಊರು ಎಲ್ಲಾ ತೆಗೆಯಲಾಗಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ಇದು ಭಾರತದ ಪುಣ್ಯ ಭೂಮಿಗೆ ಮಾಡಿದ ಅಪಮಾನ. ಅಂಬೇಡ್ಕರ್ ಈ ದೇಶದ ಆಸ್ತಿ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ವಿಚಾರಗಳನ್ನು ತಿರುಚಲು ಸಾಧ್ಯವೇ?: ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಸಿಎಂ ಹೇಳಿದ್ದಾರೆ. ನಾಗ್ಪುರ ಎಜುಕೇಷನ್ ಪಾಲಿಸಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಗೌತಮ ಬುದ್ಧ, ಮಹಾವೀರರ ಬಗ್ಗೆ ಏಕವಚನ ಬಳಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಕುವೆಂಪು ಅವರ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟವರಿಗೆ ಲಘುವಾಗಿ ಮಾತನಾಡುವುದು ಬಿಜೆಪಿ ಮನಸ್ಥಿತಿ ಸರಿ ಇಲ್ಲ. ಭಗತ್ ಸಿಂಗ್ ಯುವಕರಿಗೆ ಸ್ಪೂರ್ತಿ. ಅವರ ವಿಚಾರ ಕೈ ಬಿಡುತ್ತಾರೆ. ನಾರಾಯಣಗುರು ಸ್ತಬ್ದ ಚಿತ್ರ ಕೈ ಬಿಟ್ಟರು. ಈಗ ಪಠ್ಯದಿಂದ ಕೈ ಬಿಟ್ಟಿದ್ದಿರಿ, ಅದರಿಂದ ಏನು ತೊಂದರೆ ಆಗುತ್ತೆ ಅಂತಾ ಹೇಳ ಬೇಕು. ಧಾರ್ಮಿಕ ಚಳವಳಿ ಮಾಡಿದ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೆರಿಯರ್ ವಿಚಾರಕ್ಕೆ ಕತ್ತರಿ ಹಾಕಿ ತಿರುಚಿದ್ದಾರೆ. ಸಾವಿತ್ರಿ ಬಾಯಿ ಪುಲೆ, ಭಕ್ತಿ ಮತ್ತು ಸೂಫಿ ಪಂತ ತೆಗೆಯಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಠ್ಯ ಪುಸ್ತಕ ತಿರುಚಿರುವವರ ವಿರುದ್ಧ ಜೂನ್ 9 ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ತಾವು ಸೇರಿದಂತೆ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದು, ಸರ್ಕಾರದ ಈ ನೀತಿಯನ್ನು ಖಂಡಿಸುತ್ತೇವೆ ಎಂದು ಶಿವಕುಮಾರ್ ಇದೇ ವೇಳೆ ಘೋಷಿಸಿದರು.