ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 12 ನೇ ಪುಣ್ಯ ಸ್ಮರಣೆಯ ದಿನ | Janata.news
ಬೆಂಗಳೂರು : ಕನ್ನಡದ ನೆಚ್ಚಿನ ನಟ ದೇವತಾ ಮನುಷ್ಯ ವರನಟ ಡಾ.ರಾಜ್ ಕುಮಾರ್ ಅವರು ನಮ್ಮೆಲ್ಲರಿಂದ ದೂರವಾದ ದಿನವಿಂದು. ವರನಟ ಡಾ.ರಾಜ್ ಕುಮಾರ್ ಅವರ ಸಮಾಧಿಯ ಬಳಿ 12 ನೇ ಪುಣ್ಯ ತಿಥಿಯನ್ನು ಇಂದು ಆಚರಿಸಲಾಗುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸುತ್ತಾ, ಕರುನಾಡಲ್ಲಿ ಇನ್ನೊಮ್ಮೆ ಹುಟ್ಟಿ ಬರಲಿ ಅಣ್ಣಾವ್ರು ಎಂದು ಹಾರೈಸಿದರು. ಸಮಾಧಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದು, ಸಮಾಧಿಗೆ ರಾಜ್ ಪುತ್ರರಾದ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ದಿನ ರಾಜ್ ಸ್ಮರಣಾರ್ಥವಾಗಿ ರಕ್ತದಾನ,ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಈ ದಿನದಂದು ಅಭಿಮಾನಿಗಳ ಜೊತೆ ಸೇರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಣ್ಣಾವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕನ್ನಡಿಗರ ಅಣ್ಣಾವ್ರರಾಗಿದ್ದ ಡಾ ರಾಜ್ ಕುಮಾರ್ ಮರೆಯಾಗಿ 12 ವಸಂತಗಳೇ ಕಳೆದಿದ್ದರೂ, ಇಂದಿಗೂ ಕನ್ನಡನಾಡಿನ ಮನೆ ಮನದಲ್ಲಿ ನೆಲೆಸಿದ್ದಾರೆ.
ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಘಟಾನುಘಟಿ ಕಲಾವಿದರು ಬಂದು ಹೋದರು, ಆದರೆ ಇಂದು ಅವರ ಚಿತ್ರವನ್ನು ಟೀವಿಯಲ್ಲೂ ನೋಡಲು ಸಿಗುವುದಿಲ್ಲ . ಆದರೆ ಇಂದಿಗೂ ಡಾ.ರಾಜಕುಮಾರ ಅಭಿನಯದ ಯಾವುದೇ ಚಿತ್ರ ಪ್ರಸಾರವಾದರೂ ಜಾಹಿರಾತುಗಳ ಸರಮಾಲೆಗಳೊಂದಿಗೆ ಪ್ರಸಾರವಾಗುವುದು. ಕೆಲವೊಮ್ಮೆ ಹೊಸ ಚಿತ್ರಗಳಿಗೂ ಅಷ್ಟರ ಮಟ್ಟಿಗೆ ಜಾಹೀರಾತು ಸಿಗುವುದು ಕಷ್ಟ. ಇದು ಡಾ.ರಾಜ್ ಅಭಿಮಾನಿಗಳ ಇಂದಿನ ಸಂಖ್ಯೆ ಗೆ ಹಿಡಿದ ಕನ್ನಡಿಯಾಗಿದೆ.
ತಮಿಳನಾಡಿನಲ್ಲಿ ಇಬ್ಬರು ಹಿರಿಯ ನಟರು ತಮ್ಮ ರಾಜಕೀಯ ಲಾಭಕ್ಕಾಗಿ ಗೊಂದಲದ ಹೇಳಿಕೆ ಕೊಡುತ್ತಿರುವ ಈ ಸಂಧರ್ಭದಲ್ಲಿ, ಕನ್ನಡ ನಾಡು ನುಡಿ ವಿಷಯ ಬಂದಾಗಲೆಲ್ಲ ಸದಾ ಕನ್ನಡಿಗರ ಶಕ್ತಿಯಾಗಿ ನಿಲ್ಲುತ್ತಿದ್ದ ಆ ಮಹಾನ್ ಚೇತನ ರಾಜಣ್ಣ ನನ್ನು ಕನ್ನಡಿಗರು ನೆನೆಸುತ್ತಾರೆ.
ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.