ಅಗ್ನಿಪಥ್ ಯೋಜನೆಗೆ ಪ್ರತಿಭಟನೆ, ಕಾಂಗ್ರೆಸ್ನಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ | JANATA NEWS
ಬೆಂಗಳೂರು : ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ ಎನ್ನುವುದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸೇನೆ ಹಾಗೂ ಯುವ ಶಕ್ತಿಗೆ ಚೈತನ್ಯ ತುಂಬುವುದಾಗಿದೆ. ಸದೃಢ, ಶಿಸ್ತುಬದ್ಧ, ಕಠಿಣ ಪರಿಶ್ರಮ ಯುವ ಸಮೂಹವನ್ನು ರೂಪಿಸುವ ದೂರಾಲೋಚನೆಯ ಮಹೋನ್ನತ ಉದ್ದೇಶ ಹೊಂದಿದೆ ಎಂದರು.
ಸಶಕ್ತ ಯುವಕರ ಜನಸಂಖ್ಯೆ ಯನ್ನು ಸಿದ್ದ ಮಾಡುವ ದೃಷ್ಟಿಯಿಂದ ಹಾಗೂ ಸಶಸ್ತ್ರ ಪಡೆಗಳಲ್ಲಿ ಯುವಶಕ್ತಿ ಯನ್ನು ತುಂಬುವ ಮಹತ್ವಾಕಾಂಕ್ಷೆ ಇದೆ.. ಅಗ್ನಿಪಥ್ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ. 17 – 21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ ಅವಕಾಶ ಸಿಗಲಿದೆ ಎಂದು ಹೇಳಿದರು.
ಪರೀಕ್ಷೆ ಬರೆದವರಿಗೆ ಆತಂಕ ಇದೆ. ಅದನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಹಾರ ನೀಡುವ ವಿಶ್ವಾಸವಿದೆ. ಆದರೆ ಈ ನೆಪದಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು, ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ. ಪ್ರಯಾಣಿಕರಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟವಾಗಿದೆ. ಜವಾಬ್ದಾರಿ ಇರುವವರು ಯಾರೂ ಈ ರೀತಿ ಮಾಡುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ. ಜನ ಸ್ವಲ್ಪ ದಿನಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಬೆಂಕಿಗೆ ತುಪ್ಪ ಸುರಿಯವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿಕೆ, ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಎತ್ತಿ ತೋರಿಸುತ್ತದೆ. ಜವಾಬ್ದಾರಿಯುತ ಪ್ರತಿಪಕ್ಷಕ್ಕೆ ಸಲ್ಲದ ನಡೆಯಿದು ಎಂದು ಬೊಮ್ಮಾಯಿ ಕಿಡಿಕಾರಿದರು.