ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು! | JANATA NEWS
ಬೆಂಗಳೂರು : ರಾಜ್ಯದಲ್ಲಿ ಇದೀಗ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮತ್ತೆ ತಾರಕಕ್ಕೇರಿದೆ. ಬಿಜೆಪಿ ಅವಧಿಯಲ್ಲಿನ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡ ತಪ್ಪು ಎಂಬುದಾಗಿ ಬಿಂಬಿಸುತ್ತಿರುವಂತ ಕಾಂಗ್ರೆಸ್ ವಿರುದ್ಧ, ಕಂದಾಯ ಸಚಿವ ಆರ್ ಅಶೋಕ್ ಸಿಡಿದೆದ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪರಿಷ್ಕರಣೆ ಸಮಿತಿಯಲ್ಲಿ ಸುಮಾರು 150 ತಪ್ಪುಗಳು ಆಗಿದ್ದವು. ಈಗ 7-8 ತಪ್ಪಾಗಿದ್ದಾವೆ.ಅವುಗಳನ್ನು ಸರಿಮಾಡಲಾಗುವುದು. ದೇವೇಗೌಡರು ನಮ್ಮ ಜನಾಂಗದ ಹಿರಿಯ ನಾಯಕರು ದೇವೇಗೌಡರ ಪತ್ರಕ್ಕೆ ನಾಳೆ ಸಿಎಂ ಫಸ್ಟ್ ಕ್ಲಾಸ್ ಉತ್ತರ ಕೊಡ್ತಾರೆ ಎಂದರು.
ಹಿಂದಿನ ಸರ್ಕಾರಗಳು ಕೆಲವು ಪಠ್ಯಗಳನ್ನು ತೆಗೆದುಹಾಕಿವೆ. ಅವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟ ಇರಲಿಲ್ಲ. ಅವರಿಗೆ ಬೇಕು ಬೇಕಾದಂತೆ ಪಠ್ಯಗಳನ್ನು ಸೇರಿಸುತ್ತಿದ್ದರು. ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪದ್ಯ / ಗದ್ಯ ಸೇರಿಸಿದ್ದೆವು. ಹಿಡನ್ ಅಜೆಂಡಾ ಇರುವ ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗ ಈ ಸಾಹಿತಿಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಸಿದ್ದರಾಮಯ್ಯಗೆ ಟಿಪ್ಪು ಸುಲ್ತಾನ್ ಅಂದ್ರೆ ದೇವರು ಮೈಮೇಲೆ ಬರುತ್ತೆ, ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಅನೇಕ ಜನರನ್ನು ಮತಾಂತರ ಮಾಡಿದ್ದ ಎಂದರು.
ನಮ್ಮ ಸರ್ಕಾರದಲ್ಲಿ ಭಗತ್ ಸಿಂಗ್, ನಾರಾಯಣಗುರು ಪಠ್ಯವನ್ನು ತೆಗೆದುಹಾಕಿಲ್ಲ. ನಾವು ಪಠ್ಯ ತೆಗೆದುಹಾಕಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ಸಿಂಧು ಸಂಸ್ಕೃತಿ ಕುರಿತ ಪಾಠ ಕೈಬಿಡಲಾಗಿತ್ತು. ನಿಟ್ಟೂರು ಶ್ರೀನಿವಾಸರಾಯರ ಪಾಠವನ್ನು ಕೈಬಿಡಲಾಗಿತ್ತು. ನಮ್ಮ ಸರ್ಕಾರ ರಾಣಿ ಚನ್ನಬೈರಾದೇವಿ ಅವರ ಪಾಠವನ್ನು ಸೇರಿಸಲಾಗಿದೆ ಎಂದರು.
ನಾಡಿನ ಅಭಿಮಾನದ ಗೀತೆಗಳಾಗಿದ್ದ 'ಚೆಲುವ ಕನ್ನಡ ನಾಡಿದು', 'ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ' ಪದ್ಯಗಳನ್ನು ತೆಗೆಯಲಾಗಿತ್ತು ಎಂದು ವಿವರಿಸಿದರು.
ಮೈಸೂರು ಮನೆತನದ ಅಧಿದೇವತೆಯ ವಿವರಗಳನ್ನು ತೆಗೆಯಲಾಗಿತ್ತು. ಟಿಪ್ಪು ಸುಲ್ತಾನನ ವರ್ಣನೆಗೆ ಹೆಚ್ಚು ಸ್ಥಳ ಮೀಸಲಿಟ್ಟು, ಮೈಸೂರು ಒಡೆಯರನ್ನು ಕಡೆಗಣಿಸಲಾಗಿದೆ. ಮಥುರಾ, ಶ್ರೀಕೃಷ್ಣ ಮಂದಿರ, ಸೋಮನಾಥ ದೇವಾಲಯಗಳಿಗೆ ಸಂಬಂಧಿಸಿದ ಅಂಶಗಳನ್ನು ಕೈಬಿಡಲಾಗಿದೆ.
ಭಾರತದ ಮಹಾರಾಜರ ಕೊಡುಗೆಗಳನ್ನು ಕಡೆಗಣನೆ ಮಾಡಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಕಾಲದ ಆಡಳಿತದಲ್ಲಿ ಚಾಲ್ತಿಯಲ್ಲಿ ಗುಲಾಮಗಿರಿಯ ಅಂಶಗಳನ್ನು ಕೈಬಿಡಲಾಗಿದೆ. 'ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರ' ಹೆಸರಿನ ಪಾಠದ ಹಲವು ಅಂಶಗಳಿಗೆ ಕತ್ತರಿ ಹಾಕಲಾಗಿತ್ತು ಎಂದು ಹೇಳಿದರು.
ಮಹಾತ್ಮ ಗಾಂಧಿ ಅವರು ಭಾರತ-ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಲಾಗಿತ್ತು. ಮತೀಯ ಯುದ್ಧಗಳ ಕುರಿತಾದ ಅಂಶಗಳ ವಿವರಗಳಿಗೆ ಕಡಿವಾಣ ಹಾಕಲಾಗಿತ್ತು.
ಶಿವಾಜಿ ಮಹಾರಾಜರ ಉಲ್ಲೇಖವನ್ನು ಕಡಿಮೆ ಮಾಡಿ, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶವನ್ನು ತೆಗೆಯಲಾಗಿತ್ತು. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಟಿಪ್ಪುವಿನ ಬಗ್ಗೆ ಅತಿಯಾದ ವೈಭವೀಕರಣ ಇತ್ತು ಎಂದು ತಿಳಿಸಿದರು.