ರಾಜಸ್ತಾನದ ಭೀಕರ ಘಟನೆ : ಶಿವಾಜಿನಗರ, ಇತರ ಪ್ರದೇಶಗಳ ಮೇಲೆ ತೀರಾ ನಿಗಾ ಇರಿಸಲು ಪೊಲೀಸರಿಗೆ ಸೂಚನೆ - ಗೃಹ ಸಚಿವ | JANATA NEWS
ಬೆಂಗಳೂರು : ರಾಜಸ್ತಾನದ ಉದಯಪುರದ ಭೀಕರ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಬೆಂಗಳೂರಿನ ಶಿವಾಜಿನಗರ ಮತ್ತು ಇತರ ಸ್ಥಳಗಳ ಮೇಲೆ ತೀವ್ರ ನಿಗಾ ಇರಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಘಟನೆಯನ್ನು ಖಂಡಿಸಿದ್ದು, ಇಂತಹ ಕೃತ್ಯ ಎಸಗುವವರನ್ನು ಬಹಿಷ್ಕರಿಸಬೇಕು, ಎಂದು ಹೇಳಿದ್ದಾರೆ.
ಸುದ್ದಿ ಮಾಧ್ಯಮ ಎಎನ್ಐದೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, "ಇಂತಹ ಘಟನೆಗಳು ಅಫ್ಘಾನಿಸ್ತಾನ ಮತ್ತು ಇತರ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕಂಡುಬರುತ್ತವೆ, ಇದು ಭಾರತದಲ್ಲಿ ನಡೆಯುತ್ತಿರುವುದು ದುರದೃಷ್ಟಕರ, ಇದರ ಹಿಂದೆ ಪಾಕಿಸ್ತಾನ ಮತ್ತು ಇತರ ದೇಶಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ, ಬೆಂಗಳೂರಿನ ಶಿವಾಜಿನಗರ ಮತ್ತು ಇತರ ಪ್ರದೇಶಗಳ ಮೇಲೆ ತೀರಾ ನಿಗಾ ಇರಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗುತ್ತಿದೆ", ಎಂದಿದ್ದಾರೆ.
"ಉದಯಪುರ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಅದಕ್ಕೆ ಕಾರಣರಾದವರನ್ನು ಗಲ್ಲಿಗೇರಿಸಬೇಕು. ಮೂಲಭೂತವಾದಿಗಳಿಗೆ ಎಷ್ಟು ಜನ ಪ್ರಾಣ ತ್ಯಾಗ ಮಾಡುತ್ತಾರೋ ಗೊತ್ತಿಲ್ಲ. ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಇಂತಹ ಕೃತ್ಯ ಎಸಗುವವರನ್ನು ಬಹಿಷ್ಕರಿಸಬೇಕು", ಎಂದು ಗೃಹ ಸಚಿವರು ಹೇಳಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯ ಕುರಿತು ಮಾತನಾಡಿದ ಗೃಹ ಸಚಿವರು, ಆನೇಕಲ್ನಲ್ಲಿ ಸಾಲ ತೀರಿಸದ ಕಾರಣ ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿರುವ ಘಟನೆಯ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದು, ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮಹಿಳೆಯರಿಗೆ ನ್ಯಾಯ ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ", ಎಂದಿದ್ದಾರೆ.