ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು, ಒಬ್ಬ ಸ್ಥಳದಲ್ಲೇ ಸಾವು | JANATA NEWS
ಅಂಕೋಲಾ : ಕಾರ್ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದಿದ್ದು, ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.
ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬಡಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ನಾಲ್ವರಿಗೆ ಗಾಯವಾಗಿರುವ ಘಟನೆ ಹಾರವಾಡದ ರೈಲ್ವೆ ಬ್ರೀಜ್ ಬಳಿ ಸೋಮವಾರ ಸಂಜೆ ನಡೆದಿದೆ.
ಆಂದ್ರಪ್ರದೇಶದ ಅನಂತಪುರದ ನಿವಾಸಿ, ವಿದ್ಯಾರ್ಥಿ ರವಿತೇಜ್ ಉಪ್ಪಾರ (21) ಮೃತ ವ್ಯಕ್ತಿ, ಕಾರು ಚಾಲಕ ಪವನ್ ಬಿ, ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯೆಜ್ ಕುಮಾರ ಗಾಯಗೊಂಡವರು.
ಆಂದ್ರ ಪ್ರದೇಶದ ಜಿಮಿಟಿ ಕಾಲೇಜಿನ 10 ವಿದ್ಯಾರ್ಥಿಗಳು ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಗೋಕರ್ಣವನ್ನು ವೀಕ್ಷಿಸಿ, ಸಂಜೆ ಅಂಕೋಲಾದಿಂದ ಗೋವಾದತ್ತ ಹೊರಟಿದ್ದರು. ಕಾರು ಅಂಕೋಲಾದ ಹಾರವಾಡದ ರೈಲ್ವೆ ಬ್ರೀಜ್ ಬಳಿ ಬರುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.