ಪಿಎಸ್ಐ ಹಗರಣ: ಉಪ್ಪು ತಿಂದವರು ನೀರು ಕುಡಿಯಲೇಬೇಕು | JANATA NEWS
ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಪಿಎಸ್ಐ ನೇಮಕಾತಿಯಲ್ಲಿ ಭಾರಿ ಹಗರಣ ಆಗಿತ್ತು. ಅದನ್ನು ಮುಚ್ಚಿ ಹಾಕಿದ್ದರು.
ನಮ್ಮ ಸರಕಾರದಲ್ಲಿ ಮುಚ್ಚು ಮರೆಯಿಲ್ಲದೆ ಅಕ್ರಮಗಳನ್ನು ಬಯಲಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು. ಪಾರದರ್ಶಕವಾಗಿ, ಯಾರ ಕೈವಾಡ ಇದೆ ಎಂಬುವುದನ್ನು ಹೊರತರುವ ಕೆಲಸ ಆಗಿದೆ. ಮುಕ್ತವಾಗಿ ತನಿಖೆ ಆಗುತ್ತದೆ ಎಂದು ಸಮರ್ಥಿಸಿಕೊಂಡರು.
ಪಿಎಸ್ಐ ಹಗರಣದಲ್ಲಿ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆ. ಅವರ ಹೆಸರು ಹೇಳಿದರೆ ರಾಜ್ಯ ಸರಕಾರವೇ ಬಿದ್ದು ಹೋಗುತ್ತದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ನೀಡಿದ ಸಚಿವರು, ಯಾರೆಲ್ಲಾ ಇದ್ದಾರೆ ಅದನ್ನು ಹೇಳಿಕೊಂಡು ಹೋಗಲು ಹೇಳಿ. ಅವರು ಏನು ತನಿಖಾಧಿಕಾರಿ ಆಗಿದ್ದಾರಾ ಗೊತ್ತಿಲ್ಲ. ಅಕ್ರಮ ಯಾವುದೇ ಆದರೂ ಕ್ರಮ ಕೈಗೊಳ್ಳಲಾಗುವುದು, ಕಾನೂನಿಗಿಂತ ದೊಡ್ಡ ವ್ಯಕ್ತಿ ಯಾರೂ ಇಲ್ಲ ಎಂದು ತಿರುಗೇಟು ನೀಡಿದರು.