ಅನೈತಿಕ ಸಂಬಂಧ ಪಶ್ನಿಸಿದ ಪತ್ನಿಯನ್ನು ಮಕ್ಕಳ ಮುಂದೆಯೇ ಹತ್ಯೆಗೈದ ಪತಿ | JANATA NEWS
ಮಂಡ್ಯ : ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ ಗಂಡನೋರ್ವ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ದಾರುಣ ಪ್ರಕರಣ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗಿತಾ (27) ಗಂಡನಿಂದಲೇ ಕೊಲೆಯಾದ ಮಹಿಳೆ. ರವಿ ಮಕ್ಕಳ ಮುಂದೆಯೇ ಪತ್ನಿ ಕೊಲೆ ಮಾಡಿದ ಪಾಪ ಪತಿ. ಕೊಲೆಗೈದ ಪತಿ ರವಿ ಸ್ಥಳದಿಂದ ಪರಾರಿಯಾಗಿದ್ದಾನೆ
ಪರಸ್ತ್ರೀ ಜೊತೆ ರವಿಗೆ ಅನೈತಿಕ ಸಂಬಂಧ ಇತ್ತು. ಇದು ಪತ್ನಿಗೂ ತಿಳಿದಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ಮಾಡಿ ಮನೆಯಿಂದ ಹೋಗುವಂತೆ ದೈಹಿಕ, ಮಾನಸಿಕ ಹಿಂಸೆ ನೀಡ್ತಿದ್ದನಂತೆ. ಈ ಸಂಬಂಧ ಗ್ರಾಮದ ಮುಖಂಡರು ಸಾಕಷ್ಟು ಬಾರಿ ನ್ಯಾಯ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿಯೂ ಗಂಡ ಹೆಂಡತಿ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಆರೋಪಿ ರವಿ ಮಕ್ಕಳಿಗೆ ಪಾನಿಪುರಿ ತಿನಿಸುತ್ತಿದ್ದ ವೇಳೆ ಜಗಳ ಶುರುವಾಗಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಪತ್ನಿ ಯೋಗಿತಾಗೆ ಮನಬಂದಂತೆ ಥಳಿಸಿದ ರವಿ, ಬಳಿಕ ಪತ್ನಿಯನ್ನು ಕೋಣೆಯೊಳಗೆ ಎಳೆದೊಯ್ದಿದ್ದ. ಈ ವೇಳೆ ಮಕ್ಕಳು ತಕ್ಷಣ ಪಕ್ಕದ ಮನೆಯವರಿಗೆ ಜಗಳದ ವಿಚಾರ ತಿಳಿಸಿದರು. ನೆರೆಮನೆಯವರು ಬರುವಷ್ಟರಲ್ಲಿ ರವಿ ಪತ್ನಿಯನ್ನು ಕೊಲೆಗೈದಿದ್ದ.
ಯೋಗಿತಾ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.