ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢಿರ್ ಭೇಟಿ | JANATA NEWS
ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ, ಜೈಲಿನಲ್ಲಿ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಕ್ಷಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಕಾರಾಗೃಹಗಳಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆ ಸಹಿಸುವುದಿಲ್ಲ ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಪ್ಪನ ಅಗ್ರಹಾರ ಜೈಲಿನೊಳಗೆ ತಪಾಸಣೆ ಮಾಡಲಾಗಿದೆ. ಮುರುಗನ್ ಸಮಿತಿಯ ವರದಿ ಮೇಲೆ ಸಾಕಷ್ಟು ಜನರನ್ನು ವರ್ಗಾಯಿಸಲಾಗಿದೆ. ಡಿಐಜಿ ಸಹಿತ 25 ಜನರನ್ನು ವರ್ಗಾವಣೆ ಮಾಡಿದ್ದೇವೆ. ಮುರುಗನ್ ವರದಿಯಲ್ಲಿ ಹೆಸರಿದ್ದವರನ್ನು ಅಮಾನತು ಮಾಡಿದ್ದೇವೆ. 15 ಮಂದಿ ಜೈಲಿನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. 3800 ವಿಚಾರಾದೀನ ಕೈದಿ, 1100 ಸಜಾ ಕೈದಿಗಳು ಜೈಲಲ್ಲಿದ್ದಾರೆ.
ಸಹಾಯ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಎಫ್ಐಆರ್ ಮಾಡಿ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ. ಹರ್ಷ ಕೊಲೆ ಅಪರಾಧಿಗಳು ಗಮ್ಮತ್ತನಲ್ಲಿದ್ದರು, ಮೊಬೈಲ್ ಫೋನ್ ಬಳಸಿದ್ರು ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ.
ಕೇಂದ್ರ ಕಾರಾಗೃಹಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಜಾಮರ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, 5ಜಿ ಸಾಮರ್ಥ್ಯದವರೆಗಿನ ಮೊಬೈಲ್ ಕರೆಗಳನ್ನು ನಿಷ್ಕ್ರಿಯಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಜೈಲಿನೊಳಗಡೆ ಅಕ್ರಮವಾಗಿ ಮಾದಕ ವಸ್ತುಗಳ ಪೂರೈಕೆ, ಕಾನೂನು ಬಾಹಿರವಾಗಿ ಕೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡುವುದು ಹಾಗೂ ಮೊಬೈಲ್ ಬಳಕೆಯಂತಹ ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಜೈಲಿನೊಳಗಿನ ಅಕ್ರಮ ನಡೆಯುತ್ತಿರುವ ಬಗ್ಗೆ ಕೈದಿಗಳು ಮಾಹಿತಿ ನೀಡಿದರೆ, ಅವರಿಗೆ ಶಿಕ್ಷೆ ಕಡಿಮೆ ಮಾಡಲಾಗುವುದು. ಸಿಬ್ಬಂದಿ ಹಿಡಿದುಕೊಟ್ಟರೆ ಅವರಿಗೆ 2000 ಬಹುಮಾನ ಕೊಡಲಾಗುತ್ತೆ ಎಂದು ಹೇಳಿದರು.