ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಅವರ ಋಣವನ್ನು ನಾವೆಲ್ಲಾ ತೀರಿಸಬೇಕು | JANATA NEWS
ಬೆಂಗಳೂರು : ನಾವೆಲ್ಲ ಇಷ್ಟು ಮಾಡಿಕೊಂಡಿರುವುದು, ಈ ಮಟ್ಟಕ್ಕೆ ಬೆಳೆದಿರುವುದು ಕಾಂಗ್ರೆಸ್ ನಿಂದ, ಗಾಂಧಿ ಕುಟುಂಬದಿಂದ, ಈಗ ಗಾಂಧಿ ಕುಟುಂಬಕ್ಕೆ, ಕಾಂಗ್ರೆಸ್ ಗೆ ಋಣ ತೀರಿಸುವ ಕಾಲ ಬಂದಿದೆ. ಇಷ್ಟು ಕಿಂಚಿತ್ತೂ ಮಾಡದಿದ್ದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಶಾಸಕ ಕೆ ಆರ್ ರಮೇಶ್ ಕುಮಾರ್ ವಿವಾದದ ಕಿಡಿ ಹೊತ್ತಿಸುವ ಹೇಳಿಕೆ ನೀಡಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳಿಕೊಂಡು 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದರು.