ಬೈಕ್ ಮೇಲೆ ಮರದ ದಿಮ್ಮಿ ತುಂಬಿದ ಲಾರಿ ಮಗುಚಿ ಬಿದ್ದು ನವವಿವಾಹಿತ ಸಾವು! | JANATA NEWS
ಬೆಂಗಳೂರು : ಫ್ಲೈಓವರ್ ಮೇಲಿಂದ ಲಾರಿಯಲ್ಲಿದ್ದ ಮರದ ದಿಮ್ಮಿಗಳು ಬೈಕ್ ಮೇಲೆ ಬಿದ್ದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಮರದ ದಿಮ್ಮಿಗಳನ್ನ ಸಾಗಿಸುತ್ತಿದ್ದ ಲಾರಿಯಿಂದ ಏಕಾಏಕಿ ಮರದ ದಿಮ್ಮಿಗಳು ಬೈಕ್ ಸವಾರರ ಮೇಲೆ ಉರುಳಿ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ತಮಿಳುನಾಡು ಮೂಲದ ಮುಖೇಶ್ ಮೃತ ದುರ್ದೈವಿ. ಈತನ ಜೊತೆಗಿದ್ದ ಡೇವಿಡ್ ಹಾಗೂ ಮತ್ತೊಂದು ಬೈಕ್ನಲ್ಲಿ ತೆರಳುತ್ತಿದ್ದ ಶಿವು ಎಂಬಾತನಿಗೂ ಗಂಭೀರ ಗಾಯಗಳಾಗಿವೆ.
ನಾಗರಬಾವಿ ರಿಂಗ್ ರಸ್ತೆಯ ಫ್ಲೈ ಓವರ್ ಬಳಿ ದುರ್ಘಟನೆ ನಡೆದಿದೆ. ಸುಂಕದಕಟ್ಟೆಯಿಂದ ನಾಗರಬಾವಿ ಕಡೆ ಬರುತ್ತಿದ್ದ ಆಂಧ್ರದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿ ಸ್ಕಿಡ್ ಆಗುತ್ತಿದ್ದಂತೆ ಲಾರಿಯಲ್ಲಿದ್ದ ಮರದ ದಿಮ್ಮಿಗಳು ಫ್ಲೈಓವರ್ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿವೆ ಎನ್ನಲಾಗ್ತಿದೆ.
ಮುಖೇಶ್ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ವಾಸವಿದ್ದರು. ತಿರುವಣ್ಣಾಮಲೈ ನಲ್ಲಿರುವ ತಾಯಿ ಮತ್ತು ಅಜ್ಜಿ ನೋಡಲು ಹೋಗಿ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದರು.
ಮುಖೇಶ್ರನ್ನು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಡೇವಿಡ್ ಬೈಕ್ನಲ್ಲಿ ಪಿಕ್ ಮಾಡಿದ್ದರು. ಈ ವೇಳೆ ಪಕ್ಕದ ರಸ್ತೆಯಲ್ಲಿ ಹೋಗ್ತಿದ್ದ ಲಾರಿ ಪಲ್ಟಿಯಾಗಿದ್ದು, ಮರದ ದಿಮ್ಮಿ ಬಿದ್ದು ಸುಖೇಶ್ ಸಾವನ್ನಪ್ಪಿದ್ದಾರೆ.
ಮುಖೇಶ್ ಕಳೆದ 7 ತಿಂಗಳ ಹಿಂದೆ ಮದುವೆಯಾಗಿದ್ದರು. ಇವರ ಪತ್ನಿ 5 ಗರ್ಭಿಣಿ. ನಾಗರಬಾವಿಯ ಜಿ.ಎಂ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.