ಜನರ ಒತ್ತಾಯಕ್ಕೆ ಮಣಿದು ಆ ರೀತಿ ಹೇಳಿದೆ, ಹೈಕಮಾಂಡ್ ತೀರ್ಮಾನವೇ ಅಂತಿಮ-ಬಿಎಸ್ ವೈ | JANATA NEWS
ಬೆಂಗಳೂರು : ಜನಯ ಒತ್ತಾಯಕ್ಕೆ ಮಣಿದು ನಿನ್ನೆ ಆ ರೀತಿ ಹೇಳಿದ್ದೇನೆ. ಆದರೆ, ಪಕ್ಷದ ತೀರ್ಮಾನವೇ ಅಂತಿಮವಾಗುತ್ತೆ ಎಂದು ನಿನ್ನೆ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯುಟರ್ನ್ ಹೊಡೆದಿದ್ದಾರೆ.
ಬೆಂಗಳೂರು ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನಿನ್ನೆ ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದ್ರು. ಆದರೆ ನಾನು ನಿಲ್ಲೋದಿಲ್ಲಪ್ಪಾ ವಿಜಯೇಂದ್ರ ನಿಲ್ತಾರೆ ಎಂದು ಹೇಳಿದ್ದೆ. ಆದರೆ, ಈ ಬಗ್ಗೆ ಪಕ್ಷದ ತೀರ್ಮಾನವೇ ಅಂತಿಮ. ನನ್ನ ಸಲಹೆ ಅಷ್ಟೇ ಎಂದು ಹೇಳಿದರು.
ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಕಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದರೆ, ಈ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡೋದು ಪ್ರಧಾನಿ ಮೋದಿ ಎಂದು ತಿಳಿಸಿದರು. ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ. ರಾಷ್ಟ್ರ ಮಟ್ಟದಲ್ಲಿ ನನ್ನನ್ನು ಬೆಳೆಸಿದ್ದಾರೆ.
ಶಿಕಾರಿಪುರದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿನ್ನೆ ಹೇಳಿದ್ದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ಧರಾಗಿರುತ್ತೇವೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಸೂಚನೆ ಪಾಲಿಸುತ್ತೇವೆ. ನಾನು ಸಲಹೆ ಕೊಡಬಹುದಷ್ಟೇ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಬಿಎಸ್ವೈ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೇ ನಮ್ಮ ಗುರಿ. ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ ಎಂದರು.