ಉತ್ತರ ಕನ್ನಡ ಜಿಲ್ಲೆಗೆ ಅತೀ ಶೀಘ್ರದಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ಮಂಜೂರು - ಕಾರ್ಮಿಕ ಸಚಿವ ಹೆಬ್ಬಾರ್ | JANATA NEWS
ಬೆಂಗಳೂರು : ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಚ್ಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಜನರು ಒಂದು ಸುಸಜ್ಜಿತ ಆಸ್ಪತ್ರೆಯ ಬೇಡಿಕೆಯಿಟ್ಟು ನಡೆಸುತ್ತಲೇ ಇದ್ದ ಹೋರಾಟಕ್ಕೆ ಯಶಸ್ಸು ಸಿಗುವ ಭರವಸೆ ಕಂಡುಬಂದಿದೆ. ಕರೋನಾ ಸಂದರ್ಭದಲ್ಲಿ ಕೆಲಕಾಲ ತಣ್ಣಗಾಗಿದ್ದ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಇತ್ತೀಚೆಗೆ ಸಂಭವಿಸಿದ ಆಂಬ್ಯುಲೆನ್ಸ್ ಅಪಘಾತದ ಬಳಿಕ ಮತ್ತೊಮ್ಮೆ ವೇಗ ಪಡೆದು ಕೊಂಡಿತ್ತು.
ಕಾರ್ಮಿಕ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಉತ್ತರ ಕನ್ನಡ ಜಿಲ್ಲೆಗೆ ಅತೀ ಶೀಘ್ರದಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು, ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಸಚಿವರು ಹೇಳಿದ್ದು, ಉತ್ತರ ಕನ್ನಡ ಜಿಲ್ಲೆಗೆ ಹೈಟೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಹಾಗೂ ಸಾರ್ವಜನಿಕ ಬೇಡಿಕೆಯಂತೆ ಈಗಾಗಲೇ ಆರೋಗ್ಯ ಸಚಿವರಾದ ಡಾ.ಸುಧಾಕರ ಅವರೊಂದಿಗೆ ಆಸ್ಪತ್ರೆಯ ಮಂಜೂರಾತಿ/ಸ್ಥಾಪನೆಯ ಬಗ್ಗೆ ಚರ್ಚಿಸಲಾಗಿದೆ.
ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರೊಂದಿಗೆ ಸಭೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲೆಗೆ ಅತೀ ಶೀಘ್ರದಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು, ಎಂದು ಟ್ವೀಟ್ ಮಾಡಿದ್ದಾರೆ.