ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರು, ಮತ್ಯಾಕೆ ಬಂದ್ರೀ? ಕಾಂಗ್ರೆಸ್ ಸತ್ಯಾಗ್ರಹದಲ್ಲಿ ನಟಿ ಭಾವನಾಗೆ ತರಾಟೆ | JANATA NEWS
ಬೆಂಗಳೂರು : ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಗರದ ಕಾಂಗ್ರೆಸ್ ಭವನದಲ್ಲಿ ಇ.ಡಿ ಯಿಂದ ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಸತ್ಯಾಗ್ರಹದಲ್ಲಿ ಭಾಗಿಯಾಗಲು ನಟಿ ಭಾವನಾ ಆಗಮಿಸಿದ್ದರು. ಡಿಕೆಶಿ ಕುರ್ಚಿಪಕ್ಕದಲ್ಲಿ ಕುಳಿತುಕೊಳ್ಳಲು ಹೋಗಿದ್ದ ಭಾವನಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತೆಯೊಬ್ಬರು, ನೀವು ಬಿಜೆಪಿಯಲ್ಲಿದ್ರಿ ತಾನೇ? ಇವಾಗ ಇಲ್ಲಿಗೆ ಬಂದು ಅಧ್ಯಕ್ಷರ ಪಕ್ಕದಲ್ಲಿ ಕೂರೋಕೆ ಹೋಗ್ತಿದ್ದೀರಲ್ಲಾ? ಎಂದು ತರಾಟೆಗೆ ತೆಗೆದುಕೊಂಡರು. ಗಲಿಬಿಲಿಯಾಗಿ ಸಮಾಧಾನ ಮಾಡಲು ಮುಂದಾದ ನಟಿ ಭಾವನಾ ಮುಜುಗರಕ್ಕೆ ಒಳಗಾಗಿ ಪ್ರತಿಭಟನಾ ವೇದಿಕೆ ಮುಂಭಾಗದಿಂದ ಸೈಡ್ಗೆ ಹೋಗಿ ನಿಂತರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ, ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದರಿಂದ ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತೆಯರ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಅವರ ಪ್ರಶ್ನೆಗಳು ತಪ್ಪಲ್ಲ. ಕಾಂಗ್ರೆಸ್ ತತ್ವ ಸಿದ್ಧಾಂತಗಳು ನನಗೆ ಒಪ್ಪಿಗೆ ಆಗಿದೆ. ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಭಾಗಿಯಾಗಿರುವೆ ಎಂದರು ಸ್ಪಷ್ಟನೆ ನೀಡಿದರು. ಬಿಜೆಪಿಗೆ ಹೋದ ನಂತರ ನಾನು ಮಾಡಿದ್ದ ತಪ್ಪು ಅರಿವಿಗೆ ಬಂತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.