ನೀರಿನ ಸಂಪ್ನಲ್ಲಿ ಬಚ್ಚಿಟ್ಟಿದ್ದ 2.68 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ, ಐವರ ಬಂಧನ | JANATA NEWS
ಬೆಂಗಳೂರು : ನೀರಿನ ಸಂಪ್ನಲ್ಲಿ ಅಕ್ರಮವಾಗಿ 2.68 ಕೋಟಿ ರೂಪಾಯಿ ಮೌಲ್ಯದ ರಕ್ತ ಚಂದನ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ವಿನೋದ(31), ಮಾಗಡಿಯ ವೀರಪುರದ ಲಕ್ಷ್ಮಯ್ಯ(45), ಮಾಗಡಿಯ ಸುಬ್ಬಣ್ಣನಪಾಳ್ಯದ ಸಂಜಯ್(19), ಹಾಸನದ ಪೆದ್ದನಹಳ್ಳಿಯ ಪಿ.ಡಿ.ರಾಜು(36) ಮತ್ತು ತುಮಕೂರಿನ ಶೆಟ್ಟಿಗೆಹಳ್ಳಿಯ ಕೃಷ್ಣ(38) ಬಂಧಿತರು.
ಹೆಸರಘಟ್ಟದ ಫಾರ್ಮ್ ಹೌಸ್ನಲ್ಲಿ ನೀರಿಲ್ಲದ ಸಂಪ್ನಲ್ಲಿ ಪ್ಯಾಕ್ ಮಾಡಿ ಬಚ್ಚಿಟ್ಟಿದ್ದ ಒಟ್ಟು 2.68 ಕೋಟಿ ಮೌಲ್ಯದ 1.693 ಕೆ.ಜಿ ರಕ್ತಚಂದನವನ್ನು ಜಪ್ತಿ ಮಾಡಿ, ಇವರಿಂದ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆಂಧ್ರಪ್ರದೇಶದ ಚಿತ್ತೂರಿನಿಂದ ರಕ್ತ ಚಂದನ ತಂದು ಹೆಸರುಘಟ್ಟದ ಮನೆಯಲ್ಲಿ ಸಂಗ್ರಹಿಸಿದ್ದರು. ಚಿತ್ತೂರಿನಿಂದ ಬೆಂಗಳೂರಿಗೆ ಸಾಗಾಟ ಮಾಡಿದ ರಕ್ತ ಚಂದನವನ್ನು ಸಂಗ್ರಹಿಸಲು ಮತ್ತು ಸುರಕ್ಷಿತವಾಗಿ ನೋಡಿ ಕೊಳ್ಳುವ ಜವಾಬ್ದಾರಿ ಮಾತ್ರ ಇವರಿಗೆ ನೀಡಲಾಗಿತ್ತು ಎನ್ನಲಾಗಿದೆ.