ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ, ಅಗತ್ಯಬಿದ್ರೆ ಎನ್ಐಎ ತನಿಖೆಗೆ ವಹಿಸುತ್ತೇವೆ: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಅಗತ್ಯಬಿದ್ದರೇ ಎನ್ಐಎ ತನಿಖೆಗೆ ವಹಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಕೊಲೆಯಾಗಿದೆ. ಸ್ಕೂಟರ್ನಲ್ಲಿ ಬಂದು ಕೊಲೆ ಮಾಡಿದ್ದಾರೆ. ಕೂಡಲೇ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿದ್ದೇನೆ. ಕೇರಳ ಗಡಿಭಾಗಕ್ಕೆ ಅದು ತುಂಬಾ ಹತ್ತಿರವಾಗಿದೆ. ಕರ್ನಾಟಕ ಪೊಲೀಸರು ಕೇರಳ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ಮಂಗಳೂರು ಎಸ್.ಪಿ ಈಗಾಗಲೇ ಕಾಸರಗೋಡು ಎಸ್.ಪಿ ಜೊತೆ ಸತತವಾಗಿ ಸಂಪರ್ಕದಲ್ಲಿದ್ದಾರೆ. ರಾಜ್ಯದ ಡಿಜಿಪಿ ಕೂಡ ಕೇರಳದ ಡಿಜಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದರು.
ಈ ಪ್ರಕರಣವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಮೇಲ್ನೋಟಕ್ಕೆ ಇದು ಪೂರ್ವನಿಯೋಜಿತ ಕೊಲೆ ಅನ್ನು ರೀತಿ ಕಾಣಿಸುತ್ತಿದೆ. ಬೇರೆ ಕೇಸ್ಗಳ ರೀತಿ ಇದರ ಹೊಂದಾಣಿಕೆ ಇದೆ. ಆದಷ್ಟು ಬೇಗ ಕ್ರಮ ಜರುಗಿಸುತ್ತೇವೆ. ಉಗ್ರ ಶಿಕ್ಷೆ ಕೊಡಿಸುತ್ತೇವೆ, ಯಾವುದೇ ಅನುಮಾನಬೇಡ. ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸಲ್ಲ ಎಂದರು.
ಶೀಘ್ರವೇ ಕೊಲೆ ಮಾಡಿದವರನ್ನ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಘಟನೆ ಹಿಂದೆ ಯಾರೇ ಇದ್ದರೂ ಬಂಧಿಸುತ್ತೇವೆ. ಆವೇಶಕ್ಕೆ ಯಾರೂ ಒಳಗಾಗಬಾರದು. ಶಾಂತಿ ಕಾಪಾಡಬೇಕೆಂದು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.