ನವ ವರನ ಮನೆ ಕುಸಿದು ನವವಿವಾಹಿತ ಆಸ್ಪತ್ರೆಗೆ, 13 ಜನರಿಗೆ ಗಾಯ! | JANATA NEWS
ಶಿವಮೊಗ್ಗ : ಹೊಸದಾಗಿ ಮದುವೆಯಾದ ವರನ ಮನೆ ಕುಸಿದು ಬಿದ್ದು 13 ಜನ ಗಾಯಾಳುಗಳಾಗಿರುವ ಘಟನೆ ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ ತಾಲೂಕು ಅರಹತೊಳಲಿನ ಗಣೇಶ್ ಅವರ ವಿವಾಹ ಹರಿಹರ ತಾಲೂಕು ಹನಗವಾಡಿಯ ಸವಿತಾ ಅವರೊಂದಿಗೆ ಹರಿಹರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನೆರವೇರಿತ್ತು.
ಮದುವೆ ನಂತರ ನವದಂಪತಿ ವರನ ಸ್ವಗ್ರಾಮ ಅರಹತೊಳಲಿಗೆ ಆಗಮಿಸಿದ್ದರು. ಸೋಮವಾರ ಮನೆಗೆ ಬಂದಿದ್ದ ನೆಂಟರೊಂದಿಗೆ ಮಾತನಾಡುತ್ತಾ ಊಟ ಮಾಡಿದ್ದರು. ಮಲಗಿದ ನಂತರ ತಡರಾತ್ರಿ ಮನೆಯ ಗೋಡೆ ಕುಸಿದು ಛಾವಣಿ ಕಳಚಿ ಬಿದ್ದಿದೆ.
ಇದರಿಂದ ಮನೆಗೆ ಬಂದ ನೆಂಟರು ಸೇರಿದಂತೆ ಒಟ್ಟು 13 ಮಂದಿ ಗಾಯಗೊಂಡಿದ್ದರು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಭದ್ರಾವತಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಪ್ರಾಣಹಾನಿ ಆಗಿಲ್ಲ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.