ಕರ್ನಾಟಕವನ್ನು ಕಗ್ಗೊಲೆಗಳ ಕರ್ನಾಟಕವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಪಕ್ಷದ್ದೇ | JANATA NEWS
ಬೆಂಗಳೂರು : ಕರ್ನಾಟಕವನ್ನು ʼಕಗ್ಗೊಲೆಗಳ ಕರ್ನಾಟಕʼವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಪಕ್ಷದ್ದೇ. ಕಮಲದ ರೆಕ್ಕೆಗಳಿಗೆ ಅಂಟಿಕೊಂಡಿರುವ ರಕ್ತದ ಕಲೆಗಳು, ನಿಮ್ಮ ಪಾಪದ ಕೊಡವನ್ನು ತುಂಬಿಸುತ್ತಿವೆ ಎಂದು ಟ್ವೀಟ್ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಕಾರ್ಯಕರ್ತರನ್ನು 'ಮತೀಯ ವ್ಯಸನಿ'ಗಳನ್ನಾಗಿ ಮಾಡಿ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಅಸಲಿ ಮುಖವನ್ನು ಮಾಜಿ ಸಚಿವ ಕೆಎಸ್.ಈಶ್ವರಪ್ಪ ಕಳಬಿಚ್ಚಿಟ್ಟಿದ್ದಾರೆ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ. ಕಂಡೋರ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಸಹಪಾಠಿಯ ಕೊಲೆಗೆ ಪ್ರತಿಯಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರೆ, ಅವರ ಆತ್ಮಸ್ಥೈರ್ಯವನ್ನೇ ಅಣಕಿಸುವ, ಅವರ ನೈತಿಕತೆಯನ್ನೇ ಶಂಕಿಸುವ ಈಶ್ವರಪ್ಪನವರು ಬಿಜೆಪಿಯ ನೈಜ ಮುಖವಾಡ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಬಾವುಟ ಕಟ್ಟಲು, ಕರಪತ್ರ ಹಂಚಲು, ಮತ ಕೇಳಲು, ಟೆಂಟ್ ಹಾಕಲು, ಗೆದ್ದವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಲು ಇದೇ ಯುವಕರು ಬೇಕು. ಇಂಥ ಯುವಕರಿಗೆ ನಾಯಕರಾದವರೇ ಧರ್ಮದ ಅಪೀಮಿನ ಅಮಲೇರಿಸಿ, ಅವರ ಜೀವಕ್ಕೆ ಸಂಚಕಾರ ತಂದು, ಅವರ ಕುಟುಂಬಗಳನ್ನು ಬೀದಿಪಾಲು ಮಾಡುವ ಕಿರಾತಕ, ಕೊಲೆಗೆಡುಕ ರಾಜಕಾರಣಕ್ಕೆ ಈಶ್ವರಪ್ಪನವರೇ ಪರಾಕಾಷ್ಠೆ ಎಂದು ಕಿಡಿಕಾರಿದ್ರು.
ರಾಜೀನಾಮೆ ಒಪ್ಪಿದರೆ ನಿಮ್ಮ ಗತಿ ಏನು? ನಿಮ್ಮ ಜಾಗಕ್ಕೆ ಹೊಸಬರು ಬರುತ್ತಾರೆ!, ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ? ಯುವಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನು?" ಎಂದು ಪ್ರಶ್ನಿಸಿರುವ ಈಶ್ವರಪ್ಪ, ಸಭ್ಯ ರಾಜಕಾರಣದ ಎಲ್ಲೆ ಮೀರಿ ಅಹಂಕಾರ ಪ್ರದರ್ಶಿಸಿದ್ದಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಭಾರತ ಬಿಜೆಪಿ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಈಶ್ವರಪ್ಪ ಹೇಳಿಕೆಯೇ ಸಾಕ್ಷಿ. ನೆತ್ತರಿನ ಸುಪ್ಪತ್ತಿಗೆಯ ಮೇಲೆ ಮೆರೆಯುತ್ತಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕೊಲೆ ಸಂದರ್ಭದಲ್ಲಿ ವರ್ತಿಸಿದ ರೀತಿ ಎಲ್ಲರೂ ಬಲ್ಲರು. ಇವರು ಬಿಜೆಪಿಯ ರಕ್ಕಸ ಮುಖವನ್ನು ಅನಾವರಣ ಮಾಡಿದ್ದಾರೆ. ಕಗ್ಗೊಲೆಯಾದ ಬಡ ಯುವಕರ ಆತ್ಮಘೋಷದ ಶಾಪ ಬಿಜೆಪಿಗೆ ತಟ್ಟದೇ ಇರದು ಎಂದು ಟೀಕಿಸಿದ್ದಾರೆ.